ಬೆಂಗಳೂರು: ಎರಡು ವರ್ಷಗಳ ಅಧಿಕಾರ ನಡೆಸಿ ಬಿಎಸ್ ಯಡಿಯೂರಪ್ಪ ಅವರು ಇಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.
ಇದಕ್ಕೂ ಮುನ್ನ ಅವರು ಕೆಲವು ಮಹತ್ವದ ಘೋಷಣೆಗಳನ್ನು ಹೊರಡಿಸಿದರು. ಒಲಿಂಪಿಕ್ಗೆ ರಾಜ್ಯದಿಂದ ಹೋಗಿರುವ ಕ್ರೀಡಾಳುಗಳು ಪದಕ ಗೆದ್ದರೆ ಬಹುಮಾನ ನೀಡುವುದಾಗಿ ಯಡಿಯೂರಪ್ಪ ಪ್ರಕಟಿಸಿದರು.
ಚಿನ್ನದ ಪದಕ ಗೆದ್ದರೆ ₹5 ಕೋಟಿ, ಬೆಳ್ಳಿ ಪದಕ ಗೆದ್ದರೆ ₹3 ಕೋಟಿ ಮತ್ತು ಕಂಚಿನ ಪದಕ ಗೆದ್ದರೆ ₹2 ಕೋಟಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಅಲ್ಲದೇಇತರ ರಾಜ್ಯದ ಕ್ರೀಡಾಳುಗಳು ಚಿನ್ನದ ಪದಕ ಗೆದ್ದರೆ ₹15 ಲಕ್ಷ, ಬೆಳ್ಳಿ ಪದಕ ಗೆದ್ದರೆ ₹10 ಲಕ್ಷ ಮತ್ತು ಕಂಚಿನ ಪದಕ ಗೆದ್ದರೆ ₹5 ಲಕ್ಷ ನೀಡುವುದಾಗಿ ಘೋಷಿಸಿದರು.
ಇದೇ ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 10.25ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಯಡಿಯೂರಪ್ಪ ಅವರು ಆದೇಶ ಮಾಡಿ ಹೋಗಿದ್ದಾರೆ.
ಇಲ್ಲಿಯವರೆಗೆ ಮೂಲ ವೇತನದ ಶೇ 11.25ರಷ್ಟು ತುಟ್ಟಿಭತ್ಯೆ ಇತ್ತು. ಈಗ ಶೇ 10.25ರಷ್ಟು ಹೆಚ್ಚಳ ಮಾಡಿರುವುದರಿಂದ ಶೇ. 21.50 ರಷ್ಟು ತುಟ್ಟಿಭತ್ಯೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ.