ಬೆಂಗಳೂರು: ‘ಈ ದೇಶದ ಪ್ರತಿ ಪ್ರಜೆಗೂ ಎಲ್ಲಿಗೆ ಬೇಕಾದರೂ ಪ್ರಯಾಣಿಸುವ ಹಕ್ಕಿದೆ. ಅದೇ ರೀತಿ ಸಾರ್ವಜನಿಕ ಹಣ ಪಡೆದ ಬಳಿಕ ಅದನ್ನು ಮರುಪಾವತಿ ಮಾಡುವುದು ಪವಿತ್ರ ಕರ್ತವ್ಯ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಯಾಣ ನಿರ್ಬಂಧಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಹೊರಡಿಸಿರುವ ಲುಕ್ಔಟ್ ಸುತ್ತೋಲೆ ಪ್ರಶ್ನಿಸಿ ಉದ್ಯಮಿ ಬಿ.ಆರ್.ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನುನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ಪೀಠ ವಜಾಗೊಳಿಸಿತು.
‘₹2,800 ಕೋಟಿ ಮರುಪಾವತಿಸಲು ಬಿ.ಆರ್.ಶೆಟ್ಟಿ ಹೊಣೆಗಾರರು ಎಂದು ಬ್ಯಾಂಕ್ಗಳು ಹೇಳುತ್ತಿವೆ. ಈ ಹಣ ದೇಶದ ಮತ್ತು ಠೇವಣಿದಾರರಿಗೆ ಸೇರಿದ್ದಾಗಿದೆ. ಅದನ್ನು ವಿದೇಶದಲ್ಲಿ ವ್ಯವಹಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಅಂಶವನ್ನು ಕಡೆಗಣಿಸಲು ಆಗುವುದಿಲ್ಲ’ ಎಂದು ಪೀಠ ಹೇಳಿತು.
2020ರ ಫೆಬ್ರುವರಿಯಲ್ಲಿ ಶೆಟ್ಟಿ ಭಾರತಕ್ಕೆ ಬಂದಿದ್ದರು. ನವೆಂಬರ್ 14ರಂದು ಅಬುದಾಬಿಗೆ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ಹತ್ತಲು ಅನುಮತಿಯನ್ನು ವಲಸೆ ಅಧಿಕಾರಿಗಳು ನಿರಾಕರಿಸಿದ್ದರು.
‘ಶೆಟ್ಟಿ ಅವರು ಸಾಲಕ್ಕೆ ಜಾಮೀನುದಾರರು ಅಷ್ಟೇ. ಪ್ರಯಾಣ ಮಾಡುವುದು ಅವರ ಮೂಲಭೂತ ಹಕ್ಕು. ಯಾವುದೇ ಸೂಚನೆ ಇಲ್ಲದೆ ಲುಕ್ಔಟ್ ಸುತ್ತೋಲೆ ಹೊರಡಿಸುವುದು ಕಾನೂನು ಬಾಹಿರ ಮತ್ತು ಸಂವಿಧಾನದ 14, 19 ಮತ್ತು 21ನೇ ವಿಧಿಯ ಉಲ್ಲಂಘನೆ’ ಎಂದು ಶೆಟ್ಟಿ ಪರ ವಕೀಲರು ವಾದಿಸಿದರು.
‘ಜಾಮೀನುದಾರ ಆದರೂ ಸಾಲ ಮರುಪಾವತಿಸಲು ಅವರು ಸಮಾನ ಜವಾಬ್ದಾರರು’ ಎಂದು ಪೀಠ ಅಭಿಪ್ರಾಯಪಟ್ಟಿತು.