ಶಿರಾಳಕೊಪ್ಪ: ‘ಕಾಂಗ್ರೆಸ್ ಪಕ್ಷ ಸತತವಾಗಿ ಹಿಂದೂ ಧರ್ಮಕ್ಕೆ ಅಪಮಾನ ಮಾಡುತ್ತಿದ್ದು, ಈಗ ಸತೀಶ್ ಜಾರಕಿಹೊಳಿ ಎಂಬ ನಾಸ್ತಿಕ ಹಿಂದೂ ಧರ್ಮದ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿರುವುದನ್ನು ಖಂಡಿಸಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸಮೀಪದ ಮಳೂರು ಗ್ರಾಮದಲ್ಲಿ ಬುಧವಾರ ನಡೆದ ಬಿಜೆಪಿ ಶಕ್ತಿ ಕೇಂದ್ರ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು.
‘ಜಾತಿ– ಭೇದ ಮರೆತು ಒಂದಾಗಿ, ಒಂದೇ ತಾಯಿಯ ಮಕ್ಕಳಂತೆ ಇರುವವರು ಹಿಂದೂಗಳು. ಆದರೆ, ಕಾಂಗ್ರೆಸ್ ಮುಖಂಡರು ನಮ್ಮ ಸನಾತನ ಸಂಸ್ಕೃತಿಗೆ ಅಗೌರವ ತೋರುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಉಡುಗಣಿ, ತಾಳಗುಂದ ಹೋಬಳಿಯಲ್ಲಿ ₹ 850 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಸಾಕಾರಗೊಂಡಿದೆ. ಬಿಟ್ಟು ಹೋದ ನೂರು ಕೆರೆಗಳಿಗೆ ಮತ್ತೆ ಕಾಯಕಲ್ಪ ಕಲ್ಪಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ತಾಲ್ಲೂಕಿನ ಎಲ್ಲ ಹಳ್ಳಿಗಳಿಗೂ ಸಂಚರಿಸಲು ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹೇಳಿದರು.
‘ತಂದೆಯನ್ನು ಒಂಬತ್ತು ಬಾರಿ ಶಾಸಕ, ಉಪಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದ ಕೀರ್ತಿ ಶಿಕಾರಿಪುರ ತಾಲ್ಲೂಕಿನ ಜನತೆಗೆ ಸಲ್ಲುತ್ತದೆ. ನಿಮ್ಮ ಪ್ರೀತಿ ವಿಶ್ವಾಸ ಉಳಿಸುವ ಜೊತೆಗೆ ಇಡೀ ತಾಲ್ಲೂಕಿನ ಜನರು ಹೆಮ್ಮೆಪಡುವ ಹಾಗೆ ಕೆಲಸ ಮಾಡಿ ತೋರಿಸುತ್ತೇನೆ’ ಎಂದುರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ, ಸಣ್ಣ ಹನುಮಂತಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಮಾತನಾಡಿದರು.
ತಾಳಗುಂದ, ಬಿಳಿಕಿ, ಅಗ್ರಹಾರಮುಚಡಿ, ಚಿಕ್ಕಮಾಗಡಿ, ಹರಿಗಿ ಬಿಜೆಪಿ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಗಳು ಜರುಗಿದವು. ಬಳ್ಳಿಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷಪರಮೇಶಪ್ಪ, ಟಿಎಪಿಎಂಎಸ್ ನಿರ್ದೇಶಕರಾದ ಸುರೇಶ್ ಗೌಡ್ರು, ಸುಧೀರ್ ಮಾರವಳ್ಳಿ, ಸಾಮಾಜಿಕ ಜಾಲತಾಣದ ಗಣೇಶ್ ನಾಗಿಹಳ್ಳಿ ಭಾಗವಹಿಸಿದ್ದರು.