ರಾಮನಗರ: ನನ್ನ ವಿರುದ್ಧ ಕೆಲ ಶಾಸಕರು, ಸಚಿವರು ಸಹಿ ಸಂಗ್ರಹ ಮಾಡುತ್ತಿರುವ ಬಗ್ಗೆ ಗೊತ್ತಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಇಲ್ಲಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬುಧವಾರ ಬೆಳಿಗ್ಗೆ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು. ನನ್ನದೊಂದು ಹೇಳಿಕೆ ಇಷ್ಟೊಂದು ಸಂಚಲನ ಸೃಷ್ಟಿಸುತ್ತದೆ ಎಂದು ಗೊತ್ತಿರಲಿಲ್ಲ. ನನ್ನ ನಾಲ್ಕು ಸ್ನೇಹಿತರೂ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ. ಮುಂದೆ ಅವರಿಗೆ ಗೊತ್ತಾಗುತ್ತದೆ ಬಿಡಿ ಎಂದರು.
ವಿಜಯೇಂದ್ರ ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿ, ಯಾರು ಬೇಕಿದ್ದರೂ ದೆಹಲಿಗೆ ಹೋಗಲಿ. ಅದರಿಂದ ತೊಂದರೆ ಇಲ್ಲ ಎಂದರು.
ತನಿಖೆ ಆಗಲಿ: ಮೆಗಾ ಸಿಟಿ ಹಗರಣದ ಕುರಿತು ಮತ್ತೆ ತನಿಖೆ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಸಿಪಿವೈ ' ನ್ಯಾಯಾಲಯವೇ ಎಲ್ಲವನ್ನೂ ಕ್ಲಿಯರ್ ಮಾಡಿದೆ. ಹಿಂದಿನ ಬಹಳ ಸರ್ಕಾರಗಳು ಈ ಬಗ್ಗೆ ತನಿಖೆ ನಡೆಸಿದ್ದವು. ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಸಹ ತನಿಖೆ ಮಾಡಿಸಿದ್ದರು. ಯಾವುದೇ ತನಿಖೆಗೆ ಸಿದ್ಧ ' ಎಂದರು.