ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಎಂಟಿಬಿ ನಾಗರಾಜು, ಗೋವಿಂದ ಕಾರಜೋಳ, ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಮಾರ ಕೃಪ ರಸ್ತೆಯಲ್ಲಿರುವ ಖಾದಿ ಬಟ್ಟೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿ ಖಾದಿ ಹಾಗೂ ಗ್ರಾಮೋದ್ಯಮ ಉತ್ಪನ್ನಗಳನ್ನು ಖರೀದಿಸಿದರು.
ಬೊಮ್ಮಾಯಿ, ಪತ್ನಿಗೆ ಸಿಲ್ಕ್ ಸೀರೆ ಮತ್ತು ಜುಬ್ಬಾ ಬಟ್ಟೆ ಸೇರಿದಂತೆ ₹ 16,031 ಮೊತ್ತದ ಉತ್ಪನ್ನಗಳ ಖರೀದಿ ಮಾಡಿದರೆ, ನಾಗರಾಜ್ ₹ 3,000 ಹಾಗೂ ಬಿ.ವೈ.ವಿಜಯೇಂದ್ರ ₹ 4,300 ಮೊತ್ತದ ಬಟ್ಟೆ ಖರೀದಿ ಮಾಡಿದರು.
ಈ ಮಳಿಗೆಯನ್ನು ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ (ಅಂದಿನ ಹಣಕಾಸು ಸಚಿವ) 15.11.1984ರಲ್ಲಿ ಉದ್ಘಾಟನೆ ಮಾಡಿದ್ದರು.
ನೋಂದಣಿಯಾದ ಖಾದಿ ಭಂಡಾರಗಳಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿ ವಸ್ತ್ರಗಳ ಮೇಲೆ ಗರಿಷ್ಠ ಶೇಕಡ 35 ರಷ್ಟು ಮತ್ತು ರೇಷ್ಮೆ ಖಾದಿ ಮೇಲೆ ಶೇಕಡ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ 166 ಖಾದಿ ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 20 ಸಾವಿರಕ್ಕೂ ಅಧಿಕ ನೂಲುವವರು, ನೇಕಾರರು, ಇದ್ದಾರೆ. ಇವರಲ್ಲಿ ಶೇಕಡ 60ಕ್ಕೂ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರೇ ಇರುವುದು ವಿಶೇಷ.