ಬೆಂಗಳೂರು: ಅಕ್ರಮ ಎಸಗಿದವರ ಮನೆಯ ಮೇಲಷ್ಟೇ ಐಟಿ, ಇ.ಡಿಗಳು ದಾಳಿ ಮಾಡುತ್ತವೆ. ಅದರಲ್ಲಿ ವಿಶೇಷ ಏನಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಬಿಜೆಪಿ ಕಚೇರಿಯ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ, ಇ.ಡಿ ಇಲಾಖೆಗಳು ಎಲ್ಲರ ಮನೆಯ ಮೇಲೆ ದಾಳಿ ಮಾಡುವುದಿಲ್ಲ. ಖಚಿತ ಮಾಹಿತಿಯ ಮೇಲೆಯೇ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.
ತಮ್ಮವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ನವರು ಯಾವಾಗಲೂ ರಾಜಕೀಯ ಪ್ರೇರಿತ ಎನ್ನುವುದು ಅವರಿಗೆ ಸ್ಲೋಗನ್ ಆಗಿದೆ. ಅವರ ಮನೆ ಮೇಲೆ ಮಾಡಿಲ್ಲ ಇವರ ಮನೆ ಮೇಲೆ ಏಕೆ ದಾಳಿ ಮಾಡಿಲ್ಲ ಎಂದು ಕೇಳಲು ಕಾಂಗ್ರೆಸ್ನವರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಇ.ಡಿ ಅಥವಾ ಐ.ಟಿಯವರು ಏನು ಮಾಡಿದರೂ ಉತ್ತರ ಕೊಡಲು ನಾನು ಇ.ಡಿ, ಐ.ಟಿ ಅಧಿಕಾರಿಯಲ್ಲ. ಇವೆಲ್ಲದಕ್ಕೂ ಉತ್ತರ ಕೊಡಲು ಕಾಂಗ್ರೆಸ್ನವರು ಪರಿಣಿತರಾಗಿದ್ದಾರೆ. ಅವರಿಗೆ ಅದರಲ್ಲಿ ಬಹಳ ಅನುಭವ ಇದೆ ಎಂದು ವ್ಯಂಗ್ಯವಾಡಿದರು.
ಇವತ್ತು ದಾಳಿ ಆಗಿದ್ದರೆ, ನಾಳೆ ನ್ಯಾಯಾಲಯದಲ್ಲಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಮುಂದಿನ ವಿಚಾರ ನ್ಯಾಯಾಲಯ ನೋಡಿಕೊಳ್ಳುತ್ತದೆ. ಸುಖಾ ಸುಮ್ಮನೆ ದಾಳಿ ಮಾಡಲ್ಲ. ಖಚಿತ ಮಾಹಿತಿ ಇದ್ದಾಗ ಮಾತ್ರ ದಾಳಿ ಮಾಡುತ್ತಾರೆ ಎಂದು ಹೇಳಿದರು.