ಹಿರಿಯೂರು: ಸತತ ಮಳೆ, ಶೀತದ ವಾತಾವರಣದಿಂದ ತಾಲ್ಲೂಕಿನಲ್ಲಿ ಕುರಿ–ಮೇಕೆಗಳಲ್ಲಿ ಕಾಲು ಸೆಳೆತ ರೋಗ ಕಾಣಿಸಿಕೊಂಡಿದೆ.
ಕಳೆದ 10 ದಿನಗಳಲ್ಲಿ ಈ ರೋಗದಿಂದ 600ಕ್ಕೂ ಹೆಚ್ಚು ಕುರಿ–ಮೇಕೆಗಳು ಮೃತಪಟ್ಟಿವೆ. ಆರು ತಿಂಗಳ ಒಳಗಿನ ಕುರಿಗಳು ಹೆಚ್ಚಾಗಿ ಮೃತಪಡುತ್ತಿದ್ದು, ಸಾಕಾಣಿಕೆದಾರರಲ್ಲಿ ಆತಂಕ ಮೂಡಿಸಿದೆ.
‘ಹರ್ತಿಕೋಟೆ ಗ್ರಾಮದ ಸಮೀಪದ ಮಾರೇನಹಳ್ಳಿಯೊಂದರಲ್ಲೇ ಹತ್ತು ದಿನಗಳಲ್ಲಿ ನೂರಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ’ ಎಂದು ಗ್ರಾಮದ ತಿಪ್ಪೇಸ್ವಾಮಿ ಹೇಳಿದರು.
‘ರೊಪ್ಪದಲ್ಲಿ ಕೂಡಿ ಹಾಕಿದ್ದ ಕುರಿಗಳನ್ನು ಬೆಳಿಗ್ಗೆ ಮೇಯಲು ಬಿಟ್ಟರೆ, ಹಲವು ಕುರಿಗಳು ಕುಂಟುತ್ತಿದ್ದವು. ಪರಿಶೀಲಿಸಿದಾಗ ಕಾಲಿನ ಗೊರಸಿನಲ್ಲಿ ಸೆಳೆತ ಕಂಡುಬಂತು. ಮರಿಗಳು, ಸೊರಗಿದ ಕುರಿಗಳಿಗೆ ಈ ರೋಗ ಬಂದರೆ ಉಳಿಯುವುದು ಕಡಿಮೆ’ ಎಂದು ಕುರಿಗಾಹಿ ಚಿತ್ತಣ್ಣ.
‘ನವೆಂಬರ್ನಲ್ಲಿ ಮೊದಲ ಮೂರು ವಾರ ಸತತ ಮಳೆಯಾಗಿದೆ. ಬಹಳಷ್ಟು ಜಮೀನುಗಳಲ್ಲಿ ನೀರು ನಿಂತಿದ್ದು, ತೇವಾಂಶ ಹೆಚ್ಚಿದೆ. ಕುರಿ–ಮೇಕೆಗಳು ಹೋದಾಗ ಕಾಲಿಗೆ ಮುಳ್ಳು ಚುಚ್ಚಿ, ಅದೇ ಕಾಲುಗಳಲ್ಲಿ ಕೆಸರಿನಲ್ಲಿ ಓಡಾಡಿದರೆ ಸೆಳೆತ ಉಂಟಾಗುತ್ತದೆ’ ಎಂದು ಯರಬಳ್ಳಿ ಪಶು ಆಸ್ಪತ್ರೆಯ ಡಾ.ವಾಸಂತಿ ಹೇಳಿದರು.
‘ಕಾಲು ಸೆಳೆತ ಇರುವ ಕುರಿಗಳಿಗೆ ನೋವು ನಿವಾರಕ ಹಾಗೂ ಆಂಟಿಬಯೋಟಿಕ್ ಔಷಧ ನೀಡಿದ್ದೇವೆ. ಭೂಮಿಯಲ್ಲಿ ತೇವಾಂಶ ಕಡಿಮೆ ಆಗುವವರೆಗೆ ಕುರಿಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಮುಳ್ಳು ತುಳಿದ ಕುರಿಗಳು ಕೆಸರಿನಲ್ಲಿ ಓಡಾಡದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.