ಬೆಂಗಳೂರು: ಬಲವಂತದ ಬಂದ್ಗೆ ಅವಕಾಶವಿಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿರುವ ಕುರಿತು ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದರೆ, ಬಲವಂತದ ಬಂದ್ಗೆ ಅವಕಾಶ ನೀಡುವುದಿಲ್ಲ’ ಎಂದರು.
‘ನಾನು ಕನ್ನಡ ಮತ್ತು ಕನ್ನಡಿಗರ ಪರ ಇರುವವನು. ಕನ್ನಡಿಗರಿಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು, ಯೋಜನೆ ರೂಪಿಸಲು ಬದ್ಧನಾಗಿದ್ದೇನೆ. ಎಲ್ಲ ವರ್ಗದ ಜನರಿಗೂ ನ್ಯಾಯ ಒದಗಿಸಲು ಬದ್ಧವಾಗಿದ್ದೇನೆ’ ಎಂದು ಹೇಳಿದರು.
ಈ ಕಾರಣ ನೀಡಿ ಬಂದ್ಗೆ ಕರೆ ನೀಡಿರುವುದನ್ನು ಜನರು ಮೆಚ್ಚುವುದಿಲ್ಲ. ಪ್ರತಿಕೃತಿ ದಹನ ಸೇರಿದಂತೆ ಕೆಟ್ಟದಾಗಿ ನಡೆದುಕೊಳ್ಳುವುದನ್ನು ಗಮನಿಸಿದ್ದೇನೆ. ಸರ್ಕಾರ ಬಿಗಿ ಕ್ರಮ ಕೈಗೊಳ್ಳಲಿದೆ ಎಂದರು.