ಕೋಲಾರ: ‘ನನ್ನ ರಾಜಕೀಯ ನಿರ್ಧಾರದಂತೆ ಮುಂದೆ ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ. ನಾನು ಇರುವ ಪಕ್ಷ ಎಂದೆಂದಿಗೂ ನಂ.1 ಸ್ಥಾನದಲ್ಲಿರುತ್ತದೆ. ನನಗೆ ಪಕ್ಷಕ್ಕಿಂತ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯ. ಹೀಗಾಗಲೇ ಸಮುದಾಯದ ಮುಖಂಡರ ಚರ್ಚಿಸಿದ್ದು, ಶನಿವಾರ (ಮಾರ್ಚ್ 12) ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಂಗ್ರೆಸ್ಗೆ ಎರಡೇ ಸ್ಥಾನ ಸಿಕ್ಕಿದೆ. ಇದೇ ಮಾದರಿ ಮುಂದೆ ರಾಜ್ಯಕ್ಕೂ ಅನ್ವಯಿಸುತ್ತದೆ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ನಾವು ಮೂಲ ಕಾಂಗ್ರೆಸಿಗರು. ನನ್ನ ತಂದೆ, ತಾಯಿ, ಅಜ್ಜ ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರು. ಆದರೆ, ಈಗ ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ. 1970ರಿಂದ ಈಚೆಗೆ ಪಕ್ಷಕ್ಕೆ ಬಂದವರು ಮೂಲ ಕಾಂಗ್ರೆಸ್ಸಿಗರೇ ಅಲ್ಲ’ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರೋಲ್ಲ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿ.ಎಂ ಕುರ್ಚಿಗೆ ಕಿತ್ತಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಕುಸಿಯಲಿದೆ’ ಎಂದು ವ್ಯಂಗ್ಯವಾಡಿದರು.