ಮೈಸೂರು: ‘ವರುಣಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ಕುರಿತು ಅಮಿತ್ ಶಾ ಅವರೊಂದಿಗೆ ಚರ್ಚಿಸಿಲ್ಲ. ಸ್ಪರ್ಧೆ ಬಗ್ಗೆ ರಾಜ್ಯ, ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ‘ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ತಿಳಿಸಿದರು.
‘ಕಾರ್ಯಕರ್ತರ ಒತ್ತಾಯದ ಮೇರೆಗೆ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ. ಮೋರ್ಚಾಗಳ ಸಮಾವೇಶದ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಅಮಿತ್ ಶಾ ಅವರು ಮನೆಗೆ ಉಪಾಹಾರಕ್ಕೆ ಬಂದಿದ್ದ ವೇಳೆ, ವರುಣಾ ಸೇರಿದಂತೆ ಕೆಲವು ಕ್ಷೇತ್ರಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದರು. ಎಷ್ಟು ಜಿಲ್ಲೆಗಳಿಗೆ ಹೋಗಿದ್ದೀಯಾ ಎಂದು ಕೇಳಿದ್ದರು. ಆ ಬಗ್ಗೆ ವರದಿ ನೀಡಿರುವೆ. ಫಲಾನುಭಾವಿಗಳ ಸಮಾವೇಶ, ವಿಜಯಸಂಕಲ್ಪ ಯಾತ್ರೆ ಬಗ್ಗೆ ಅವರಿಗೆ ತೃಪ್ತಿ ಇದೆ’ ಎಂದರು.