ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ನಾಲ್ಕು ದಿನಗಳಿಂದ ಇಳಿಮುಖ ಮಾಡಿದ್ದು, 1.02 ಲಕ್ಷ ಮಾದರಿಗಳನ್ನು ಮಂಗಳವಾರ ಪರೀಕ್ಷೆ ನಡೆಸಲಾಗಿದೆ. 1,501 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ.
ಸೋಂಕು ದೃಢ ಪ್ರಮಾಣವು ಶೇ 1.46ರಷ್ಟು ವರದಿಯಾಗಿದೆ. 17 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ಹಾಗೂ 9 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ.
ಬೆಂಗಳೂರಿನಲ್ಲಿ 354, ದಕ್ಷಿಣ ಕನ್ನಡದಲ್ಲಿ 247 ಹಾಗೂ ಮೈಸೂರಿನಲ್ಲಿ 108 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 100ರ ಗಡಿಯೊಳಗೆ ವರದಿಯಾಗಿವೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.97 ಲಕ್ಷ ದಾಟಿದೆ.
ಕೋವಿಡ್ ಪೀಡಿತರಲ್ಲಿ 32 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 17 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ 5, ಹಾಸನದಲ್ಲಿ 4, ಬೆಳಗಾವಿ ಹಾಗೂ ಕೋಲಾರದಲ್ಲಿ ತಲಾ 3, ಉತ್ತರ ಕನ್ನಡ, ತುಮಕೂರು, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ದರವು ಶೇ 2.13ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್ನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 36,437ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿತರಲ್ಲಿ 2,039 ಮಂದಿ ಚೇತರಿಸಿಕೊಂಡಿದ್ದಾರೆ.ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 28.38 ಲಕ್ಷ ದಾಟಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಕಂಡಿದ್ದು, ಸದ್ಯ 22,487 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.