ಬೆಂಗಳೂರು: ಕೊರೊನಾ ರೋಗಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು ₹ 1.20 ಲಕ್ಷ ಹಣ ಪಡೆದ ಮೂವರನ್ನು ಸದಾಶಿವನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವೆಂಕಟ ಸುಬ್ಬರಾವ್ (28), ಮಂಜುನಾಥ್ (31) ಹಾಗೂ ಮತ್ತೊಂದು ಆಸ್ಪತ್ರೆಯಲ್ಲಿ ‘ಆರೋಗ್ಯ ಮಿತ್ರ’ನಾಗಿ ಕೆಲಸ ಮಾಡುತ್ತಿದ್ದ ಪುನೀತ್ (31) ಬಂಧಿತರು.
‘ಕೊರೊನಾ ಸೋಂಕಿತ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ನೆಲಮಂಗಲದಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಹಾಸಿಗೆ ಸಿಗದೆ ಪರದಾಡುತ್ತಿದ್ದರು. ಈ ವೇಳೆ ₹ 1.20 ಲಕ್ಷ ಹಣ ನೀಡಿದರೆ ಬೇರೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸುವುದಾಗಿ ಆರೋಪಿಗಳು ತಿಳಿಸಿದ್ದರು’.
‘ತುರ್ತಾಗಿ ಹಾಸಿಗೆ ಅಗತ್ಯ ಇದ್ದಿದ್ದರಿಂದ ಸೋಂಕಿತೆಯ ಮಗ ಲಕ್ಷ್ಮೀಶ ಎಂಬುವರು ಆರೋಪಿಗಳಿಗೆ ಗೂಗಲ್ ಪೇ ಮೂಲಕ ₹ 50 ಸಾವಿರ ಹಾಗೂ ₹ 70 ಸಾವಿರ ನಗದು ನೀಡಿದ್ದರು. ಇದಾದ ನಂತರ ಬೇರೆ ಆಸ್ಪತ್ರೆಯಲ್ಲಿ ರೋಗಿಗೆ ಹಾಸಿಗೆ ವ್ಯವಸ್ಥೆಯೂ ಆಯಿತು. ಆದರೆ, ಕೆಲವೇ ಗಂಟೆಗಳಲ್ಲಿ ರೋಗಿ ಮೃತಪಟ್ಟಿದ್ದರು’.
‘ಇದರಿಂದ ಮನನೊಂದ ಮೃತರ ಮಗ ಲಕ್ಷ್ಮೀಶ ಹಾಸಿಗೆಗಾಗಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಇದರ ಅನ್ವಯ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.