ಬೆಂಗಳೂರು: ‘ನನಗೆ ಸಚಿವ ಸ್ಥಾನ ಬೇಕೇ ಬೇಕು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ’ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರ, ರಾಜ್ಯದ ಕೆಲಸ ಮಾಡಲು ಅವಕಾಶ ಕೊಡಬೇಕು. ಹೀಗಾಗಿ, ಸಚಿವ ಸ್ಥಾನ ನೀಡುವಂತೆ ಪಕ್ಷದ ನಾಯಕರನ್ನು ಒತ್ತಾಯಿಸಿದ್ದೇನೆ’ ಎಂದರು.
‘ಸಂಪುಟ ವಿಸ್ತರಣೆಯನ್ನಾದರೂ ಮಾಡಲಿ. ಇಲ್ಲವೇ ಪುನಾರಚನೆಯನ್ನಾದರೂ ಮಾಡಲಿ. ನನಗೆ ಸಚಿವ ಸ್ಥಾನ ಬೇಕೇ ಬೇಕು. ಕೇವಲ ಕ್ಷೇತ್ರದ ಅಭಿವೃದ್ಧಿಗೆ ಅಂತ ಕೇಳುತ್ತಿಲ್ಲ. ಕ್ಷೇತ್ರದ ಜೊತೆ ರಾಜ್ಯದ ಕೆಲಸವನ್ನೂ ಮಾಡುತ್ತೇನೆ. ನನಗೆ ಈ ಬಾರಿ ಸಚಿವ ಸ್ಥಾನ ಕೊಡಬೇಕು’ ಎಂದು ಆಗ್ರಹಿಸಿದರು.
ಸಂಪುಟದಿಂದ ಹಿರಿಯರನ್ನು ಕೈಬಿಡುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆ ಬಗ್ಗೆ ನಾನು ಮಾತನಾಡುವುದಿಲ್ಲ. ಮಾತನಾಡುವುದು ಸಮಂಜಸವೂ ಅಲ್ಲ. ಅದನ್ನು ಮುಖ್ಯಮಂತ್ರಿ, ಹಿರಿಯರು ನಿರ್ಧರಿಸುತ್ತಾರೆ’ ಎಂದರು.