ಬೆಂಗಳೂರು: ‘ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕೈವಾಡ ಇದ್ದೇ ಇದೆ’ ಎಂದು ಮಾಜಿ ಸಚಿವ ರೋಷನ್ ಬೇಗ್ ಆರೋಪಿಸಿದ್ದಾರೆ.
ಸುದ್ದಿಗಾರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಗಲಭೆಯಲ್ಲಿ ಕೆಲವರು ಅಮಾಯಕರು ಇರಬಹುದು. ಅಮಾಯಕರನ್ನು ಬಿಡಿ ಎಂದು ನಾನೇ ಹೇಳಿದ್ದೇನೆ. ಆದರೆ, ಮೌಲಾನಾಗಳು ಗೋರಿಪಾಳ್ಯದಿಂದ ಯಾಕೆ ಇಲ್ಲಿಗೆ ಬರಬೇಕಿತ್ತು. ಟಿಪ್ಪು ನಗರದಿಂದ ಡಿ.ಜೆ ಹಳ್ಳಿಗೆ ಯಾಕೆ ಬರಬೇಕಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.
‘ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಜಮೀರ್ ಏನು ಅಂತ ನಾನು ಮಾತನಾಡಲಿ. ನಾನೊಬ್ಬ ಯೂತ್ ಮೂವ್ಮೆಂಟ್ನಿಂದ ಬಂದ ಸೀನಿಯರ್ ಲೀಡರ್. ಬೇರೆ ಯಾರಾದರೂ ಸೀನಿಯರ್ ನನ್ನ ವಿರುದ್ಧ ಮಾತಾಡಿದರೆ ಉತ್ತರ ಕೊಡುತ್ತಿದ್ದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ವಾಚ್ಮನ್ ಆಗ್ತೀನಿ ಎಂದು ಜಮೀರ್ ಅಂದಿದ್ದರು. ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್ಮನ್ ಆಗಲಿ’ ಎಂದು ತಿರುಗೇಟು ನೀಡಿದರು.
‘ಹಿಂದೆ ಇದೇ ರೀತಿ ಗಲಾಟೆ ಆದಾಗ ನನ್ನ ಜೀವ ಉಳಿಸಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸುದರ್ಶನ್ ಅವರೇ ಹೊರತು, ಜಮೀರ್ ಅಲ್ಲ. ಇಂಥ ವ್ಯಕ್ತಿಗಳು ಎಲ್ಲಿಯೂ ನನ್ನ ಸಹಾಯಕ್ಕೆ ಬಂದಿಲ್ಲ’ ಎಂದರು.