ಬೆಂಗಳೂರು: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆ ಯುತ್ತಿರುವ ‘ಭಾರತ ಒಗ್ಗೂಡಿಸಿ’ ಪಾದ ಯಾತ್ರೆ ಕಾರ್ಯಕ್ರಮದ ಯಶಸ್ಸಿಗೆ ಪಕ್ಷದ ಕೆಲವು ಶಾಸಕರು, ಮುಖಂಡರು ಶ್ರಮಿಸುತ್ತಿಲ್ಲ. ಅಂತಹವರಿಗೆ ವಿಧಾನ ಸಭಾ ಚುನಾವಣೆಯಲ್ಲಿ ವಿಶ್ರಾಂತಿ ನೀಡಬೇಕಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಶುಕ್ರವಾರ ಎಚ್ಚರಿಕೆ ನೀಡಿದರು.
‘ಭಾರತ ಒಗ್ಗೂಡಿಸಿ’ ಪಾದಯಾತ್ರೆ ಆಯೋಜನೆಗೆ ಸಂಬಂಧಿಸಿ ದಂತೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ಕೆಲವು ಶಾಸಕರು ಒಂದು ದಿನ ಬಂದು ಪಾದಯಾತ್ರೆಯ ಕೆಲಸ ಮಾಡುವು ದಕ್ಕೂ ಆಗುವುದಿಲ್ಲ ಎಂದರೆ ಏನು ಮಾಡುವುದು’ ಎಂದು ಪ್ರಶ್ನಿಸಿದರು.
‘ಪ್ರತಿದಿನ ಇಬ್ಬರು ಶಾಸಕರು ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಅವರೊಂದಿಗೆ ಕ್ಷೇತ್ರದ ಕಾರ್ಯಕರ್ತರು ಪಾಲ್ಗೊಳ್ಳಬೇಕು.ಯಾವ ಶಾಸಕರಿಗೂ ವಿನಾಯಿತಿ ನೀಡಲು ಆಗುವುದಿಲ್ಲ. ಒಂದು ದಿನ ಜನರನ್ನು ಕಳುಹಿಸಿಕೊಡಿ ಎಂದು ಆರ್.ವಿ.ದೇಶಪಾಂಡೆ ಅವರಿಗೆ ಹೇಳಿದ್ದೆ. ಅವರು ಆಗುವುದಿಲ್ಲ ಎಂದರು. ಯಾರು ಮುಂದಿನ ಚುನಾ ವಣೆಯ ಟಿಕೆಟ್ ಆಕಾಂಕ್ಷಿಗಳೋ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿ. ನನ್ನ ಮತ್ತು ಸಿದ್ದರಾಮಯ್ಯ ಅವರ ಫೋಟೊ ಹಾಕದೆ ಕ್ಷೇತ್ರದಲ್ಲಿ ಕೆಲಸ ಮಾಡಿ’ ಎಂದರು.
‘ಸ್ವಾತಂತ್ರ್ಯ ನಡಿಗೆಗೆ ಕೆಲವರು ಬಂದು ಮುಖ ತೋರಿ ಎಲ್ಲೋ ಹೋಗಿ ಕುಳಿತಿದ್ದರು. ಅದು ನನಗೆ ಗೊತ್ತಿದೆ, ಎಐಸಿಸಿ ನಾಯಕರಿಗೂ ಗೊತ್ತಿದೆ. ಆಗಸ್ಟ್ 3ರಂದು ಸಿದ್ದರಾಮೋತ್ಸವ ಮಾಡಿದರು. ಬಸವರಾಜ ರಾಯರಡ್ಡಿ ತಯಾರಿಯಲ್ಲಿದ್ದರು. ಕಾರ್ಯಕ್ರಮಕ್ಕೆ ಜನರು ಬಂದರು, ಆದರೆ, ಸಂಚಾರ ನಿಯಂತ್ರಣ ಸರಿಯಾಗಿ ನಡೆಯಲಿಲ್ಲ. ಅದನ್ನು ನೋಡಿದ ಬಳಿಕ ಸ್ವಾತಂತ್ರ್ಯ ನಡಿಗೆಯಲ್ಲಿ ಸಂಚಾರ ದಟ್ಟಣೆ
ಆಗದಂತೆ ನೋಡಿಕೊಂಡೆ. ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದು ಸ್ಮರಣೀಯ ಅಲ್ಲವೆ’ ಎಂದು ಅವರು ಕೇಳಿದರು.
ಬದನವಾಳುವಿನಲ್ಲಿ ಗಾಂಧಿ ಜಯಂತಿ: ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ‘ಅಕ್ಟೋಬರ್ 2ರಂದು ಭಾರತ ಒಗ್ಗೂಡಿಸಿ ಪಾದಯಾತ್ರೆಯು ನಂಜನ ಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಸಾಗಲಿದೆ. ಅಲ್ಲಿಯೇ ಕೆಪಿಸಿಸಿ ವತಿಯಿಂದ ಗಾಂಧಿ ಜಯಂತಿ ಆಚರಿಸ ಲಾಗುವುದು. ಮಹಾತ್ಮ ಗಾಂಧೀಜಿ ಅವರು 1932ರಲ್ಲಿ ಬದನ ವಾಳು ಗ್ರಾಮಕ್ಕೆ ಭೇಟಿ ನೀಡಿದ್ದರು’ ಎಂದು ಹೇಳಿದರು.
ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಆರ್.ವಿ. ದೇಶಪಾಂಡೆ, ಬಿ. ರಮಾನಾಥ ರೈ, ಎಚ್. ಆಂಜನೇಯ ಸೇರಿ ಕೆಪಿಸಿಸಿಯ ಹಲವು ಪದಾಧಿಕಾರಿಗಳು ಸಭೆಯಲ್ಲಿದ್ದರು.
ಡಿಕೆಶಿ ಕೆಲಸಕ್ಕೆ ಮೊಯಿಲಿ ಮೆಚ್ಚುಗೆ
‘ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷದ ಸಂಘಟನೆ ಅತ್ಯುತ್ತಮವಾಗಿ ನಡೆಯುತ್ತಿದೆ. 50 ವರ್ಷಗಳಲ್ಲಿ ಯಾವತ್ತೂ ತಳಮಟ್ಟದಿಂದ ಪಕ್ಷ ಸಂಘಟನೆ ಆಗಿರಲಿಲ್ಲ. ಈಗ ಆ ಕೆಲಸ ಆಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಶ್ಲಾಘಿಸಿದರು.
‘ಕೆಲಸ ಮಾಡುವವರಿಗೆ ಟಿಕೆಟ್’
‘ಎಐಸಿಸಿಯಿಂದ ಸುನೀಲ್ ಕನುಗೋಲು ನೇತೃತ್ವದ ಸಮಿತಿ ಬಂದಿದೆ. ಅದು ಎಲ್ಲ ಕ್ಷೇತ್ರಗಳಲ್ಲೂ ವರದಿ ಕಲೆಹಾಕುತ್ತಿದೆ. ಯಾರು? ಏನು? ಕೆಲಸ ಮಾಡುತ್ತಿದ್ದಾರೆ ಎಂದು ಗಮನಿಸುತ್ತಿದೆ. ನಾನು ಏನು ಮಾಡುತ್ತಿದ್ದೇನೆ? ನೀವು ಏನು ಮಾಡುತ್ತಿದ್ದೀರಿ? ಎಂಬುದನ್ನೂ ನೋಡುತ್ತಿದೆ. ಈ ಬಾರಿಗೆ ಹೊಸಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಶಿವಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.