ಬೆಂಗಳೂರು: ರಾಜ್ಯದ ಹಲವು ಮಠಾಧೀಶರು ಜಾತಿ ರಾಜಕಾರಣದೊಳಕ್ಕೆ ಸಕ್ರಿಯವಾಗಿ ಧುಮುಕಿ, ಜಾತಿಯ ಕಾರಣಕ್ಕಾಗಿಯೇ ಜನವಿರೋಧಿ ಸರ್ಕಾರವೊಂದರ ಬೆಂಬಲಕ್ಕೆ ನಿಂತಿರುವ ಪರಿಯು ತಲೆ ತಗ್ಗಿಸುವಂತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.
ಮಠಾಧೀಶರ ವರ್ತನೆ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಠಾಧೀಶರು ತಮ್ಮ ಕರ್ತವ್ಯವನ್ನು ಮರೆತು ಜನವಿರೋಧಿ ಸರ್ಕಾರವನ್ನು ಬೆಂಬಲಿಸುತ್ತಿರುವುದು ಜಾತಿವಾದಿ ಸಮಾಜವನ್ನು ಮುಂದುವರಿಸುವ ಅಪಾಯದ ಸೂಚನೆ ನೀಡುತ್ತಿದೆ’ ಎಂದು ಹೇಳಿದ್ದಾರೆ.
ಬೆಲೆ ಏರಿಕೆ, ಕಳಪೆ ಆಡಳಿತದ ಮೂಲಕ ಸಾಮಾನ್ಯ ಜನರ ಬದುಕು ದುಸ್ಥಿತಿಗೆ ತಲುಪುವಂತೆ ಮಾಡಿರುವ ಸರ್ಕಾರಕ್ಕೆ ಮಠಾಧೀಶರು ಚಾಟಿ ಬೀಸಬೇಕಿತ್ತು. ಆದರೆ, ಈ ಜವಾಬ್ದಾರಿಯನ್ನು ಮರೆತ ಸ್ವಾಮಿಗಳು ಜಾತಿಯ ಕಾರಣಕ್ಕೆ ಜನವಿರೋಧಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ತೈಲ ಬೆಲೆ ಏರಿಕೆ ಮತ್ತು ಕೋಮುವಾದಿಗಳ ವಿರುದ್ಧ ಮಠಾಧೀಶರು ಒಗ್ಗೂಡಿ ಧ್ವನಿ ಎತ್ತಿದ್ದರೆ ನೆಮ್ಮದಿ ಅನಿಸುತ್ತಿತ್ತು. ಆದರೆ, ಜನರ ಬದುಕಿಗೆ ಅನನುಕೂಲ ಉಂಟುಮಾಡಿರುವ ನಾಯಕನೊಬ್ಬನ ತಲೆಯನ್ನು ಕೇವಲ ಜಾತಿಯ ಕಾರಣಕ್ಕಾಗಿ ಕಾಯಲು ಒಗ್ಗಟ್ಟಾಗಿರುವುದು ಬೇಸರದ ಸಂಗತಿ’ ಎಂದು ಮಹದೇವಪ್ಪ ಹೇಳಿದ್ದಾರೆ.