ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಗೆ ಸಹಿ ಕೋರಿದ ಮುರುಘಾ ಶ್ರೀ; ಪ್ರಸ್ತಾವ ಸಲ್ಲಿಕೆಗೆ ಹೈಕೋರ್ಟ್ ನಿರ್ದೇಶನ

Last Updated 28 ಸೆಪ್ಟೆಂಬರ್ 2022, 9:39 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕೆ ಪೊಕ್ಸೊ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಚಿತ್ರದುರ್ಗದ "ಶ್ರೀ ಜಗದ್ಗುರು ಮುರುಘ ರಾಜೇಂದ್ರ" (ಎಸ್ ಜೆ ಎಂ) ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಜೈಲಿನಿಂದಲೇ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಯನ್ನು ಆಲಿಸಿರುವ ಹೈಕೋರ್ಟ್, "ಈ ಸಂಬಂಧ ನಿರ್ದಿಷ್ಟ ಮನವಿ ಸಲ್ಲಿಸಿ" ಎಂದು ಅವರ ಪರ ವಕೀಲರಿಗೆ ನಿರ್ದೇಶಿಸಿದೆ.

ಈ ಕುರಿತಂತೆ ಆರೋಪಿ ಮುರುಘಾ ಶ್ರೀಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆರೋಪಿ ಅರ್ಜಿದಾರರ ಪರ ವಕೀಲ ಸಂದೀಪ್ ಎಸ್.ಪಾಟೀಲ್ ಮಂಡಿಸಿದ ವಾದಾಂಶಗಳು:

* ಅರ್ಜಿದಾರ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಪೋಕ್ಸೊ ಕಾಯ್ದೆ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆಯ ಆರೋಪದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

* ಅವರು ಬೃಹನ್ಮಠದ ಪೀಠಾಧಿಪತಿಯಾಗಿದ್ದು ಮಠ ಮತ್ತು ವಿದ್ಯಾಪೀಠದ ಆರ್ಥಿಕ ವ್ಯವಹಾರದ ನೇರ ಉಸ್ತುವಾರಿಯ ಏಕೈಕ ವ್ಯಕ್ತಿಯಾಗಿದ್ದಾರೆ.

* ಅವರು ಮಠ ಮತ್ತು ವಿದ್ಯಾಪೀಠದ ಸೋಲ್ (ಏಕೈಕ) ಟ್ರಸ್ಟೀ ಆಗಿದ್ದು ಅವರೊಬ್ಬರೇ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿದ್ದಾರೆ.

* ಈಗ ಅವರು ಜೈಲಿನಲ್ಲಿ ಇರುವ ಕಾರಣ ಮಠದ ವಿದ್ಯಾಸಂಸ್ಥೆಗಳ ಸುಮಾರು 3,500 ನೌಕರರು ಸಂಬಳ ಇಲ್ಲದೆ ಪರದಾಡುವಂತಾಗಿದೆ.

* ಆದ ಕಾರಣ ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು.

*ಎರಡು ತಿಂಗಳ ನಂತರ ಏನಾಗುತ್ತದೆಯೋ ಕಾದು ನೋಡಿಕೊಂಡು ಆಮೇಲೆ ಚೆಕ್ ಗಳಿಗೆ ಸಹಿ ಮಾಡುವುದಕ್ಕೆ ಸಂಬಂಧಿಸಿದಂತೆ ಬೇರೊಬ್ಬರಿಗೆ ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ನೀಡಲು ಕೇಳಿಕೊಳ್ಳಲಾಗುವುದು.

* ಈಗ ಸದ್ಯ ಎಸ್ ಜೆ ಎಂ ವಿದ್ಯಾಪೀಠಕ್ಕೆ ಆಡಳಿತ ನಿರ್ವಹಣೆಗಾಗಿ ಕಾರ್ಯದರ್ಶಿಯೊಬ್ಬರನ್ನು ಮತ್ತು ಮಠದ ದೈನಂದಿನ ಧಾರ್ಮಿಕ ವಿಧಿ ವಿಧಾನಗಳ ಅನೂಚಾನ ನಿರ್ವಹಣೆಹಾಗಿ ಶಾಖಾ ಮಠದ ಮತ್ತೊಬ್ಬ ಹಿರಿಯ ಸ್ವಾಮೀಜಿಗೆ ಜವಾಬ್ದಾರಿ ವಹಿಸಲಾಗಿದೆ.

* ಆದರೆ, ವಿದ್ಯಾಪೀಠದ ಕಾರ್ಯದರ್ಶಿಗೆ ಚೆಕ್ ಗಳಿಗೆ ಸಹಿ ಮಾಡುವ ಅಧಿಕಾರ ಇಲ್ಲ.

* ಹೀಗಾಗಿ, ಜಿಪಿಎ ನೇಮಕ ಆಗುವ ತನಕ ತಾತ್ಕಾಲಿಕವಾಗಿ ಎರಡು ತಿಂಗಳ (ಆಗಸ್ಟ್ ಮತ್ತು ಸೆಪ್ಟೆಂಬರ್) ತಿಂಗಳ ಪಾವತಿಗೆ ಅನುವಾಗುವಂತೆ ಅಕ್ಟೋಬರ್ 1ರಿಂದ 5ರವರೆಗೆ ಐದು ದಿನಗಳ ಕಾಲ 200 ಚೆಕ್ ಗಳಿಗೆ ಸಹಿ ಮಾಡಲು ಒಂದು ಬಾರಿ ಅವಕಾಶ ನೀಡಬೇಕು.

ಇದನ್ನೂ ಓದಿ:

ಇದಕ್ಕೆ ಪ್ರತಿಯಾಗಿ ನ್ಯಾಯಪೀಠ ಹೇಳಿದ್ದು:

* ಅರೋಪಿ ಪೊಕ್ಸೊ ಕೇಸು ಎದುರಿಸುತ್ತಿದ್ದಾರಾ?

* ನೀವು (ಸಂದೀಪ್ ಪಾಟೀಲ್) ಹೇಳುತ್ತಿರುವ ವಾದಾಂಶದಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ.

* ನೀವು ಈ ಬಗ್ಗೆ ವಿಚಾರಣಾ ಕೋರ್ಟ್ ನಲ್ಲಿ ಈ ಮೊದಲಿಗೆ ಏನಾದರೂ ಕೇಳಿದ್ದಿರಾ?

* ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಮಠಕ್ಕೆ ಆಡಳಿತಾಧಿಕಾರಿಯನ್ನು ಏನಾದರೂ ನೇಮಕ ಮಾಡಲಾಗಿದೆಯೇ?

ಅರ್ಜಿದಾರರ ಮ‌ನವಿಯನ್ನು ಬಲವಾಗಿ ಆಕ್ಷೇಪಿಸಿದ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್-1 ಕಿರಣ್ ಜವಳಿ ಅವರು ಹೇಳಿದ್ದು:

* ಜೈಲು ಕಾಯ್ದೆ ಮತ್ತು ಜೈಲು ಕೈಪಿಡಿ ಅನುಸಾರ ಈ ರೀತಿ ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡು ತಮ್ಮ ಬ್ಯಾಂಕ್ ಖಾತೆಯ ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ಇಲ್ಲ.

* ಈಗ ಇವರೊಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಇದು ಮತ್ತೊಬ್ಬರಿಗೂ ದಾರಿಯಾಗಬಲ್ಲದು. ಹಾಗಾಗಿ, ಅರ್ಜಿದಾರರ ಮನವಿ ಸ್ವೀಕಾರಾರ್ಹವಲ್ಲ.

ಇದನ್ನೂ ಓದಿ:

ಇದಕ್ಕೆ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯ:

* ಆರೋಪಿಯ ಹರಕತ್ತಿನಿಂದ ಇತರರು ನರಳುವಂತಾಗಬಾರದಲ್ಲವೇ?

* ಅರ್ಜಿದಾರರು ಏನು ಹೇಳುತ್ತಿದ್ದಾರೊ ಅದರ ಪ್ರಸ್ತಾವವನ್ನು ಲಿಖಿತವಾಗಿ ಜ್ಞಾಪನಾ ಪತ್ರದೊಂದಿಗೆ ನಿಮ್ಮ ಮುಖೇನ ನ್ಯಾಯಪೀಠಕ್ಕೆ ಸಲ್ಲಿಸಲಿ.

* ಪ್ರಸ್ತಾವ ಸಲ್ಲಿಕೆಯಾದ ನಂತರ ಅದನ್ನು ಪರಿಶೀಲಿಸೋಣ. ಏನೇ ಅಗಲಿ ಇವರ ಕಾರಣದಿಂದ ನೌಕರರು ಬಳಲಬಾರದು ಅಲ್ಲವೇ?

ಉಭಯತ್ರರ ವಾದ ಆಲಿಕೆಯ ನಂತರ ನ್ಯಾಯಪೀಠವು, "ಅರ್ಜಿದಾರರು ಇಂದೇ ಮಧ್ಯಾಹ್ನ ಎಸ್ ಪಿ ಪಿಗೆ ಪ್ರಸ್ತಾವ ಸಲ್ಲಿಸಲಿ. ನಾಳೆ ಬೆಳಗ್ಗೆ ವಿಚಾರಣೆ ನಡೆಸೋಣ ಎಂದು ಗುರುವಾರ (ಸೆ.29) ಬೆಳಗ್ಗೆಗೆ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?:

‘ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಅನುವಾಗುವಂತೆ ಮತ್ತು ಮಠದ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ಇತರೆ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲು ಅಧಿಕಾರಿಗಳಿಗೆ ಮಾನವಿ ಮಾಡಿದ್ದರು. ಈ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಪರಿಣಾಮ ಶರಣರ ಪರ ವಕೀಲರು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಈ ಕುರಿತಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಈಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?:

‘ಶಿವಮೂರ್ತಿ ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್‌) ಟ್ರಸ್ಟೀ ಮತ್ತು ಅಧ್ಯಕ್ಷರಾಗಿರತಕ್ಕದ್ದು ಎಂದು 2010ರ ನವೆಂಬರ್‌ 26ರಂದು ಟ್ರಸ್ಟ್‌ ಡೀಡ್‌ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದು, ಮಠ ಮತ್ತು ವಿದ್ಯಾಪೀಠದ ಬ್ಯಾಂಕ್‌ ಖಾತೆಯು ಅವರ ಹೆಸರಿನಲ್ಲೇ ಇರತಕ್ಕದ್ದು, ಕೇವಲ ಅಧ್ಯಕ್ಷರು ಮಾತ್ರವೇ ಇದರ ಬ್ಯಾಂಕ್‌ ಖಾತೆಯ ನಿರ್ವಹಣೆ ನೋಡಿಕೊಳ್ಳಬೇಕು. ಇದರ ಲೆಕ್ಕಪರಿಶೋಧನೆಯನ್ನು ಅರ್ಹ ವ್ಯಕ್ತಿ ವರ್ಷಕ್ಕೊಮ್ಮೆ ನಡೆಸತಕ್ಕದ್ದು’ ಎಂದು ಟ್ರಸ್ಟ್‌ ದಾಖಲೆಯಲ್ಲಿ ವಿವರಿಸಲಾಗಿದೆ.

‘ಬೃಹನ್ಮಠವು, ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಸ್‌ಜೆಎಂ ವಿದ್ಯಾಪೀಠದ ಅಡಿಯಲ್ಲಿ ಹತ್ತಿರತ್ತಿರ 150 ವಿದ್ಯಾಸಂಸ್ಥೆಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT