ಕೋಲಾರ: ಬಿಗ್ಬಾಸ್ 7ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ್ ಮದುವೆಯಾದ ಕೆಲವೇ ತಾಸುಗಳಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ.
ಕೋಲಾರ ಜಿಲ್ಲೆಯ ಚೈತ್ರಾ ಮತ್ತು ಮಂಡ್ಯ ಜಿಲ್ಲೆಯ ನಾಗಾರ್ಜುನ್ ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಭಾನುವಾರ (ಮಾರ್ಚ್ 28) ಬೆಳಿಗ್ಗೆಯಷ್ಟೇ ಮದುವೆಯಾಗಿದ್ದರು. ಬಳಿಕ ಕೋಲಾರಕ್ಕೆ ಬಂದ ನವ ದಂಪತಿಯು ಸಂಜೆ ವೇಳೆಗೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ಪರಸ್ಪರ ದೂರು ಕೊಟ್ಟಿದ್ದಾರೆ.
‘ನನಗೆ ಚೈತ್ರಾ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಕೆಲ ಸಂಘಟನೆಗಳ ಸದಸ್ಯರು ನನ್ನನ್ನು ಗೃಹ ಬಂಧನದಲ್ಲಿಟ್ಟು ಬೆದರಿಸಿ ಬಲವಂತವಾಗಿ ಅವರೊಂದಿಗೆ ಮದುವೆ ಮಾಡಿಸಿದ್ದಾರೆ’ ಎಂದು ನಾಗಾರ್ಜುನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ಖ್ಯಾತಿಯ ಚೈತ್ರ ಕೋಟೂರು ಸರಳ ವಿವಾಹ
ಇದಕ್ಕೆ ಪ್ರತಿಯಾಗಿ ಚೈತ್ರಾ, ‘ನಾನು ಮತ್ತು ನಾಗಾರ್ಜುನ್ ಹಲವು ವರ್ಷಗಳಿಂದ ಪರಿಚಿತರು. ಪರಸ್ಪರರು ಪ್ರೀತಿಸಿ ಮದುವೆಯಾಗಿದ್ದೇವೆ. ನಾಗಾರ್ಜುನ್ ನನಗೆ ತುಂಬಾ ಇಷ್ಟ. ನಾನು ಅವರೊಂದಿಗೆ ಬದುಕುತ್ತೇನೆ’ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಈ ನಡುವೆ ನಾಗಾರ್ಜುನ್ ಕುಟುಂಬ ಸದಸ್ಯರು ಕೋಲಾರದಲ್ಲಿರುವ ಚೈತ್ರಾ ಅವರ ಮನೆಯ ಬಳಿ ಬಂದು ಜಗಳವಾಡಿದ್ದಾರೆ. ಮಹಿಳಾ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.