ಬೆಂಗಳೂರು: ‘ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ಚಳುವಳಿ, ಹೋರಾಟ ಹೆಚ್ಚಾಗುತ್ತಿದೆ. ಮೇಲ್ವರ್ಗದಿಂದ ಹಿಡಿದು ಎಲ್ಲರೂ ಬೀದಿಗಿಳಿದಿದ್ದಾರೆ. ಮೆರವಣಿಗೆ, ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಯಾವ ವಿಚಾರದಲ್ಲೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ವಿಚಾರವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಮೀಸಲಾತಿ ಕೇಳಲು ಜನತಂತ್ರ ವ್ಯವಸ್ಥೆಯಲ್ಲಿ ಅವಕಾಶವಿದೆ. ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳಿವಳಿಕೆ ನೀಡಬೇಕು. ಕೇವಲ ಮನವಿ ಸ್ವೀಕರಿಸಿದರೆ ಎಲ್ಲವೂ ಮುಗಿಯುವುದಿಲ್ಲ’ ಎಂದರು.
‘ಈಗಲೇ ಮೀಸಲಾತಿ ಘೋಷಿಸುವಂತೆ ಪಂಚಮಸಾಲಿ ಸ್ವಾಮೀಜಿಗಳು ಪಟ್ಟು ಹಿಡಿದಿದ್ದಾರೆ. ಕುರುಬ ಸಮುದಾಯ ಕೂಡ ಮೀಸಲಾತಿ ಕೇಳುತ್ತಿದೆ. ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಕೇಳಿದ ಕೂಡಲೇ ಕೊಡಲು ಬರುವುದಿಲ್ಲ. ಆದರೆ, ಸರ್ಕಾರ ನಮಗೆ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದೆ’ ಎಂದರು.
ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಡಿರುವ ಅರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಂವಿಧಾನದ ಚೌಕಟ್ಟಿನಲ್ಲೇ ಯತ್ನಾಳ್ ಮಾತನಾಡಿದ್ದಾರೆ. ಅವರ ಆರೋಪದಲ್ಲಿ ನ್ಯಾಯವಿದೆ’ ಎಂದರು.
‘ಪಕ್ಷ, ಸರ್ಕಾರದ ವಿರುದ್ಧ ಯತ್ನಾಳ್ ಹೇಳಿಕೆ ನೀಡಿಲ್ಲ. ಜನವಿರೋಧಿ ಭಾಷಣಗಳನ್ನೂ ಮಾಡಿಲ್ಲ. ಸರ್ಕಾರದ ರೀತಿನೀತಿಗಳ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬ, ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಮಂತ್ರಿಗಳ ನಿರಾಸಕ್ತಿ, ಅವರ ನಡವಳಿಕೆ ಬಗ್ಗೆ ಹೇಳಿದ್ದಾರೆ. ವಿರೋಧ ಪಕ್ಷಗಳೇ ಸುಮ್ಮನಾದರೆ ಇನ್ನೇನು ಮಾಡಬೇಕು’ ಎಂದರು.
‘ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ಅವರು ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ’ ಎಂದೂ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.