ಬೆಂಗಳೂರು: ಮಕ್ಕಳು ಶಾಲೆಗೆ ಬಂದ ದೃಶ್ಯಗಳನ್ನು ಕಂಡು ನನ್ನ ಮನಸ್ಸು ಪುಳಕಿತವಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಾದ್ಯಂತ ಶಾಲೆಗಳು ಪುನರಾರಂಭವಾಗಿರುವ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಮಕ್ಕಳು ಶಾಲೆಗೆ ಬಂದ ದೃಶ್ಯಗಳನ್ನು ಕಂಡು ನನ್ನ ಬಾಲ್ಯದ ದಿನಗಳು ನೆನಪಾದವು. ಅಪ್ಪ-ಅಮ್ಮನ ಬೆರಳಿಡಿದು ತರಗತಿಗಳತ್ತ ಬಂದ ಚಿಣ್ಣರ ಸಂಭ್ರಮ ಇಡೀ ನಾಡಿಗೆ ಹೊಸಕಳೆ ತಂದಿದೆ’ ಎಂದಿದ್ದಾರೆ.
‘ಗ್ರಾಮೀಣ ಭಾಗದ ಅನೇಕ ಕಡೆ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಮಳೆ ಬಂದರೆ ಹಳ್ಳಿಶಾಲೆಗಳು ಸೋರುತ್ತಿವೆ. ಕಿಟಕಿ ಬಾಗಿಲುಗಳೇ ಇಲ್ಲದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಉತ್ತಮ ವಾತಾವರಣದಲ್ಲಿ ಮಕ್ಕಳು ಕಲಿಯುವ ವ್ಯವಸ್ಥೆ ಕಲ್ಪಿಸಬೇಕು. ಇದು ರಾಜ್ಯ ಸರ್ಕಾರದ ಹೊಣೆ’ ಎಂದು ಹೇಳಿದ್ದಾರೆ.
ಶಾಲಾ ಕಟ್ಟಡಗಳ ದುರಸ್ಥಿ ಬಗ್ಗೆ ಗಮನ ಹರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಗ್ರಾಮೀಣ ಭಾಗದ ಅನೇಕ ಕಡೆ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಮಳೆ ಬಂದರೆ ಹಳ್ಳಿಶಾಲೆಗಳು ಸೋರುತ್ತಿವೆ. ಕಿಟಕಿ ಬಾಗಿಲುಗಳೇ ಇಲ್ಲದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಉತ್ತಮ ವಾತಾವರಣದಲ್ಲಿ ಮಕ್ಕಳು ಕಲಿಯುವ ವ್ಯವಸ್ಥೆ ಕಲ್ಪಿಸಬೇಕು. ಇದು ರಾಜ್ಯ ಸರಕಾರದ ಹೊಣೆ. 3/3
ಕೋವಿಡ್ ಕರಿಛಾಯೆಯಿಂದ ಮನೆಯಲ್ಲಿಯೇ ಹೆಚ್ಚು ಸಮಯ ಕಳೆದಿದ್ದ ಮಕ್ಕಳಿಗೆ ಮರಳಿ ಶಾಲೆಗೆ ಮರಳುವುದು ಉತ್ಸಾಹ ತಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮೊದಲ ದಿನ ಖುಷಿಯಿಂದ ಪಾಠಪ್ರವಚನಗಳಲ್ಲಿ ಭಾಗಿಯಾದರು. ಸ್ನೇಹಿತರನ್ನು ಭೇಟಿಯಾಗಿ ಸಂಭ್ರಮಿಸಿದರು. ಹಲವರು ಎರಡು ವರ್ಷಗಳ ನಂತರ ತಮ್ಮ ಸ್ನೇಹಿತರನ್ನು ಭೇಟಿಯಾಗಿದ್ದು ಸಂತಸ ಮೂಡಿಸಿತ್ತು.
ಶಾಲೆ ಆರಂಭಕ್ಕೆ ಅಧಿಕಾರಿಗಳು, ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ಬಹುತೇಕ ಶಾಲೆಗಳಲ್ಲಿ ಮೊದಲ ದಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿರುವುದು ವರದಿಯಾಗಿದೆ.