ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಜ್‌ ರೇವಣ್ಣ ನಾಮಪತ್ರದಲ್ಲಿ ಅಪೂರ್ಣ ಮಾಹಿತಿ; ಹೈಕೋರ್ಟ್ ನೋಟಿಸ್

ರಾಜ್ಯ, ಕೇಂದ್ರ ಚುನಾವಣಾ ಆಯುಕ್ತರಿಗೆ ನೋಟಿಸ್
Last Updated 3 ಡಿಸೆಂಬರ್ 2021, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ವಿಧಾನ್ ಪರಿಷತ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್.ಸೂರಜ್ ಅವರ ನಾಮಪತ್ರ ಕಾನೂನು ಬಾಹಿರವಾಗಿದೆ’ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ಶುಕ್ರವಾರ ಆದೇಶಿಸಿದೆ.

ಹಾಸನ ಜಿಲ್ಲೆ ದಂಡಿಗಾನ ಹೋಬಳಿಯ ಕುಂದೂರು ಗ್ರಾಮದ ಕೆ.ಎಲ್.ಹರೀಶ್‌ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಪ್ರತಿವಾದಿಗಳಾದ ಜಿಲ್ಲಾ ಚುನಾವಣಾಧಿಕಾರಿ ಸೇರಿದಂತೆ ಮೂವರಿಗೆ ನೋಟಿಸ್ ಜಾರಿಗೊಳಿಸಿ, ಇದೇ 6ಕ್ಕೆ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ‘ಆರ್.ಸೂರಜ್‌ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ನಮೂನೆ 26ರ ಅಡಿಯಲ್ಲಿನ ಪ್ರಮಾಣಪತ್ರದಲ್ಲಿ ಅನೇಕ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಆದ್ದರಿಂದ, ಇವರ ನಾಮಪತ್ರ ತಿರಸ್ಕೃರಿಸಬೇಕು ಅಥವಾ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದರು.

ಅರ್ಜಿಯಲ್ಲಿ ಏನಿದೆ?: ‘ಸೂರಜ್‌ ಅವರು ಪ್ರಮಾಣಪತ್ರದಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರ, ನಗದು, ಸಾಲ ಹಾಗೂ ಆರ್ಥಿಕ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ. ಇವುಗಳಿಗೆ ಅನ್ವಯವಾಗುವ ಕಾಲಂಗಳಲ್ಲಿ ಇದು ಅನ್ವಯಿಸುವುದಿಲ್ಲ’ ಎಂದು ಬರೆದಿದ್ದಾರೆ.

‘ಸೂರಜ್‌ 2017ರ ಮಾರ್ಚ್‌ 4ರಂದು ಅರಮನೆ ಮೈದಾನದಲ್ಲಿ ಸಾಗರಿಕಾ ಅವರನ್ನು ವಿವಾಹವಾಗಿದ್ದಾರೆ. ಆದರೆ,ಪ್ರಮಾಣ ಪತ್ರದಲ್ಲಿಅವರು ತಮ್ಮ ಮದುವೆಯ ಕುರಿತಾದ ವಿವರಗಳನ್ನು ಮುಚ್ಚಿಟ್ಟಿದ್ದಾರೆ.ಅವರ ಆಸ್ತಿ ವಿವರಗಳನ್ನು ಘೋಷಿಸಿಲ್ಲ. ಅಂತೆಯೇ ತಮ್ಮ ಕುಟುಂಬಸ್ಥರ ಆಸ್ತಿ ವಿವರಗಳ ಬಗ್ಗೆಗಾಗಲೀ ಅಥವಾ ಹೊಳೆನರಸೀಪುರದಲ್ಲಿನ ಕರ್ನಾಟಕ ಬ್ಯಾಂಕ್‌ ಶಾಖೆಯಲ್ಲಿ ಹೊಂದಿರುವ ಅವರ ಖಾತೆ ಸಂಖ್ಯೆ 608ರಲ್ಲಿರುವ ₹ 15 ಲಕ್ಷದ ವಿವರ ನೀಡಿಲ್ಲ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT