ತುಮಕೂರು:‘ಹನುಮ ಜಯಂತಿಯ ದಿನದಂದು ಹನುಮನ ದೇವಸ್ಥಾನ ಒಡೆಯುವ ಕೆಲಸ ಮಾಡಿದ್ದೀರಿ. ಹುಷಾರ್! ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ’.
–ಹೀಗೆಂದು ಹುಬ್ಬಳ್ಳಿಯ ಗಲಾಟೆಯ ಬಗ್ಗೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವಸ್ಥಾನಕ್ಕೆ ಕಲ್ಲು ಹೊಡೆಯುವುದು ಬಾಬರ್, ಔರಂಗಜೇಬ್, ಟಿಪ್ಪು ಸುಲ್ತಾನರ ಮಾನಸಿಕತೆ. ಇದು ಹೀಗೆ ಮುಂದುವರೆದರೆ, ಹಿಂದೂ ದೇವಾಲಯಗಳ ಮೇಲೆ ಕಣ್ಣು ಹಾಕಿದರೆ ಒದ್ದು ಓಡಿಸಬೇಕಾಗುತ್ತದೆ. ಮುಂದೆ ಎಚ್ಚರಿಕೆಯಿಂದ ಹೆಜ್ಜೆಯಿಡಿ ಎಂದರು.
ಈ ಘಟನೆಯ ಹಿಂದೆ ಆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಎಂ.ಐ.ಎಂ, ಒ.ಐ.ಸಿ ಹಾಗೂ ಪಿ.ಎಫ್.ಐ ಪಕ್ಷಗಳ ಮುಖಂಡರ ಕೈವಾಡವಿದೆ. ಚುನಾವಣೆಯ ಓಟ್ ಬ್ಯಾಂಕ್ಗಾಗಿ ಇಂತಹ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಣ್ಣ ಘಟನೆಯನ್ನು ದೊಡ್ಡದು ಮಾಡಿ, ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿರುವುದು ಎಷ್ಟು ಸರಿ. ಲೋಡುಗಟ್ಟಲೆ ಕಲ್ಲು ಎಲ್ಲಿಂದ ಬಂತು. ಇದು ಪೂರ್ವ ಯೋಜಿತವಾದ ಗಲಾಟೆ. ಇದರ ಹಿಂದಿರುವವರನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಇಂತಹ ಸಂವಿಧಾನ ವಿರೋಧಿ ಕೃತ್ಯ ಮಾಡುತ್ತಿರುವುದು ಸರಿಯಲ್ಲ. ಶಾಂತಿ ಸೌಹಾರ್ದತೆಯ ರಾಷ್ಟ್ರದಲ್ಲಿ ಇಂತಹ ಘಟನೆಗಳು ಮರು ಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.