ಉಡುಪಿ: ಹಿಂದೆ ದೇವಾಲಯಗಳನ್ನು ಖರೀದಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರೆ ಅದಕ್ಕೆ ಆಕ್ಷೇಪವಿಲ್ಲ. ಆದರೆ, ದೇವಾಲಯಗಳನ್ನು ಅತಿಕ್ರಮಿಸಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದರೆ ಅವುಗಳ ಮರು ಪರಿವರ್ತನೆ ಅನಿವಾರ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ’ಹಿಂದೆ ಆಗಿಹೋಗಿರುವ ಘಟನೆಗಳ ಪ್ರಕರಣಗಳಲ್ಲಿ ನ್ಯಾಯಾಲಯ ನೀಡುವ ತೀರ್ಪನ್ನು ಹಿನ್ನಡೆ ಎಂದು ಭಾವಿಸದೆ ಪ್ರತಿಯೊಬ್ಬರೂ ಪಾಲಿಸಬೇಕು. ವಿವಾದಿತ ಜಾಗ ಪೂಜಾ ಮಂದಿರ ಎಂದು ಸಾಬೀತಾದರೆ ಹಿಂದೂಗಳಿಗೆ ಬಿಟ್ಟುಕೊಡಬೇಕು. ದರ್ಗಾ ಎಂಬುದು ಸಾಬೀತಾದರೆ ಮುಸಲ್ಮಾನರಿಗೆ ಬಿಟ್ಟುಕೊಡಬೇಕು. ಧರ್ಮ ಸಂಘರ್ಷಕ್ಕಿಳಿಯದೆ ಎಲ್ಲರೂ ಶಾಂತಿ, ಸೌಹಾರ್ದದಿಂದ ಬದಕುಬೇಕು ಎಂದು ಸಲಹೆ ನೀಡಿದರು.
ರಾತ್ರಿ 10ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳ ಬಳಕೆ ನಿರ್ಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ವಿಶೇಷ ದಿನಗಳಲ್ಲಿ ಮಾತ್ರ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಧ್ವನಿವರ್ಧಕ ಬಳಸಬೇಕು ಎಂದು ಸ್ವಾಮೀಜಿ ಹೇಳಿದರು.
ಸಮಾಜದಲ್ಲಿ ಶಾಂತಿ, ನೆಮ್ಮದಿ ಉಳಿಯಬೇಕಾದರೆ ಸರ್ಕಾರ, ಸಂವಿಧಾನ, ಸುಪ್ರೀಂಕೋರ್ಟ್ ನೀಡುವ ಆದೇಶ, ನಿರ್ದೇಶನ, ನೀತಿ, ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.