ಅಕ್ರಮ ಗಣಿಗಾರಿಕೆ – ಕರಗುತ್ತಿದೆ ಬೆಟ್ಟ, ಏರುತ್ತಿದೆ ದಂಡ!

ಮಂಡ್ಯ: ಅಕ್ರಮ ಗಣಿಗಾರಿಕೆಯಿಂದಾಗಿ ಬೇಬಿಬೆಟ್ಟ ದಿನೇದಿನೇ ಕರಗುತ್ತಿದೆ. ಆದರೆ, ಗಣಿ ಮಾಲೀಕರು ಉಳಿಸಿಕೊಂಡಿರುವ ರಾಜಧನ ಹಾಗೂ ದಂಡದ ಬಾಕಿ ಮೊತ್ತ ಬೆಟ್ಟಕ್ಕಿಂತ ಎತ್ತರಕ್ಕೆ ಏರತೊಡಗಿದೆ.
ಬೆಟ್ಟದಲ್ಲಿ ಗಣಿ ಚಟುವಟಿಕೆ ನಡೆಸಿರುವ 30 ಕಂಪನಿಗಳು 2017ರಿಂದ ಇಲ್ಲಿವರೆಗೆ ಪರಿಸರ ಅನುಮೋದನೆ ಪಡೆಯದೆ ಲಕ್ಷಾಂತರ ಮೆಟ್ರಿಕ್ ಟನ್ ಕಲ್ಲು ಹೊರತೆಗೆದಿವೆ. ಪರಿಸರ ಅನುಮೋದನಾ ಸಮಿತಿ ನಿಗದಿಗೊಳಿಸಿದ ಮಿತಿಯಂತೆ ವರ್ಷಕ್ಕೆ ಗರಿಷ್ಠ 25 ಸಾವಿರ ಮೆಟ್ರಿಕ್ ಟನ್ ಗಣಿಗಾರಿಕೆ ನಡೆಸಬಹುದು. ಆದರೆ, ಕಂಪನಿಗಳು ಅತ್ಯಾಧುನಿಕ ಸ್ಫೋಟಕ, ಗಣಿ ಯಂತ್ರ ಬಳಸಿ ನಿಗದಿತ ಪ್ರಮಾಣಕ್ಕಿಂತ 100 ಪಟ್ಟು ಹೆಚ್ಚು ಕಲ್ಲು ತೆಗೆದಿರುವುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪತ್ತೆ ಮಾಡಿದೆ.
ಸಮೀಕ್ಷೆ ನಡೆಸಿದ ಗಣಿ ಇಲಾಖೆ ಮೂಲ ರಾಜಧನ ₹ 60 ಸೇರಿ ಪ್ರತಿ ಮೆಟ್ರಿಕ್ ಟನ್ ಕಲ್ಲಿಗೆ ₹ 300 ದಂಡ (ಒಟ್ಟು ₹ 360) ವಿಧಿಸಿದೆ. ಲಕ್ಷಾಂತರ ಮೆಟ್ರಿಕ್ ಟನ್ ಗಣಿಗಾರಿಕೆ ನಡೆಸಿರುವ ಹಿನ್ನೆಲೆಯಲ್ಲಿ ಬೆಟ್ಟದಲ್ಲಿನ 30 ಕಂಪನಿಗಳಿಗೆ ₹ 280 ಕೋಟಿ ದಂಡ ವಿಧಿಸಲಾಗಿದೆ. ಅದರಲ್ಲಿ ಸ್ಥಳೀಯ ಜನಪ್ರತಿನಿಧಿಯೊಬ್ಬರ ಗಣಿಗೆ ₹ 32 ಕೋಟಿ ದಂಡ ವಿಧಿಸಲಾಗಿದೆ.
ಓದಿ: ಅಕ್ರಮ ಗಣಿಗಾರಿಕೆ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪ: ಸುಮಲತಾ ಹೇಳಿಕೆ
₹ 280 ಕೋಟಿ ದಂಡದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ₹ 1.60 ಕೋಟಿ ದಂಡವನ್ನು ಮಾತ್ರ ವಸೂಲಿ ಮಾಡಿದೆ. 2020ರ ಜನವರಿಯಲ್ಲಿ ಈ ಕಂಪನಿಗಳ ಅನುಮತಿ ರದ್ದುಗೊಳಿಸಲಾಗಿದೆ.
ಇಲಾಖೆಯ ಆದೇಶದ ವಿರುದ್ಧ ಕಲ್ಲು ಗಣಿ ಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ದಂಡ ರದ್ದತಿಗೆ ಕೋರಿದ್ದಾರೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಡ್ರೋನ್ ಕ್ಯಾಮೆರಾ ಬಳಸಿ ಮತ್ತೆ ನಷ್ಟ ಸಮೀಕ್ಷೆ ನಡೆಸಲು ಆದೇಶಿಸಿದೆ.
ಅದರನ್ವಯ ಗಣಿ ಇಲಾಖೆ ಜೂನ್ 28ರಂದು ಡ್ರೋನ್ ಸರ್ವೆಗೆ ಟೆಂಡರ್ ಆಹ್ವಾನಿಸಿದೆ. ಗಣಿ ಮಾಲೀಕರು ಸಲ್ಲಿಸಿದ ಅರ್ಜಿ ಅವರಿಗೇ ತಿರುಗುಬಾಣವಾಗಿದ್ದು, ಸರ್ವೆಯಿಂದ ತಪ್ಪಿಸಿಕೊಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಡ್ರೋನ್ ಸಮೀಕ್ಷೆಗೆ ಹೈಕೋರ್ಟ್ ಸೂಚನೆ ನೀಡಿರುವ ಕಾರಣ ಗಣಿ ಮಾಲೀಕರು ದಂಡ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಜಿಲ್ಲೆಯಲ್ಲಿ 116 ಗಣಿಗಳು ಅನಧಿಕೃತವಾಗಿ 58 ಲಕ್ಷ ಮೆಟ್ರಿಕ್ ಟನ್, ಭೂಮಿ ಒತ್ತುವರಿ ಮಾಡಿ 50 ಲಕ್ಷ ಮೆಟ್ರಿಕ್ ಟನ್ ಗಣಿಗಾರಿಕೆ ನಡೆಸಿರುವುದು ಪತ್ತೆಯಾಗಿದ್ದು, ಬೇಬಿಬೆಟ್ಟದ ₹ 280 ಕೋಟಿ ಸೇರಿದಂತೆ ಒಟ್ಟು ₹ 320 ಕೋಟಿ ದಂಡ ವಿಧಿಸಲಾಗಿದೆ. ಇನ್ನೂ 2 ವರ್ಷದ ಸಮೀಕ್ಷೆ ನಡೆಯಬೇಕಿದ್ದು, ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ.
ಓದಿ: ಅಕ್ರಮ ಗಣಿಗಾರಿಕೆ ಪರಿಣಾಮ ಕುರಿತ ಪ್ರಜಾವಾಣಿ ವರದಿ ಉಲ್ಲೇಖಿಸಿ ಸುಮಲತಾ ಟ್ವೀಟ್
ದಿಲೀಪ್ ಬಿಲ್ಡ್ ಕಾನ್ಗೆ ದಂಡ: ಬೆಂಗಳೂರು– ಮೈಸೂರು ದಶಪಥ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡ್ಕಾನ್ ಕಂಪನಿ ರಸ್ತೆ ಕಾಮಗಾರಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದನ್ನು ಪತ್ತೆಹಚ್ಚಲಾಗಿದೆ. ಕಾಳೇನಹಳ್ಳಿ, ಸಿದ್ದಾಪುರ ವ್ಯಾಪ್ತಿಯ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ₹ 102 ಕೋಟಿ ದಂಡ ವಿಧಿಸಲಾಗಿದೆ. ಒಟ್ಟು 40 ಪ್ರಕರಣ ದಾಖಲಿಸಲಾಗಿದ್ದು ಪ್ರತ್ಯೇಕವಾಗಿ ₹ 300 ಕೋಟಿ ದಂಡ ವಿಧಿಸಲಾಗಿದೆ.
‘ಗಣಿ ಮತ್ತು ಖನಿಜ ಅಭಿವೃದ್ಧಿ, ನಿಯಂತ್ರಣ ಕಾಯ್ದೆ (ಎಂಎಂಡಿಆರ್ಎ) 2020, ಜೂನ್ ತಿಂಗಳಲ್ಲಿ ತಿದ್ದುಪಡಿಗೆ ಒಳಗಾಗಿದೆ. ನೂತನ ತಿದ್ದುಪಡಿಯಂತೆ ಅಕ್ರಮ ಗಣಿಗಾರಿಕೆಗೆ ವಿಧಿಸುವ ದಂಡವನ್ನು ಪ್ರತಿ ಮೆಟ್ರಿಕ್ ಟನ್ಗೆ ₹ 1,570ಕ್ಕೆ ಹೆಚ್ಚಿಸಿದೆ. ಅದರನ್ವಯ ಸಮೀಕ್ಷೆ ನಡೆಸಿದರೆ ಜಿಲ್ಲೆಗೆ ₹ 8 ಸಾವಿರ ಕೋಟಿ, ಬೇಬಿಬೆಟ್ಟವೊಂದಕ್ಕೆ ₹ 3 ಸಾವಿರ ಕೋಟಿ ರಾಜಧನ– ದಂಡ ಬರುತ್ತದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಮೋದಾದೇವಿ ಪತ್ರ ತಂದ ಬದಲಾವಣೆ
‘ಬೇಬಿಬೆಟ್ಟ ಅಮೃತ್ ಮಹಲ್ ಕಾವಲು ಪ್ರದೇಶವಾಗಿದ್ದು, ಮೈಸೂರು ರಾಜಮನೆತನದ ಖಾಸಗಿ ಆಸ್ತಿಯಾಗಿದೆ. ಸರ್ವೆ ನಂಬರ್ 1ರ 1,623 ಎಕರೆ ಪ್ರದೇಶವನ್ನು ಖಾತೆ ಮಾಡಿಕೊಡಬೇಕು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಪಾಂಡವಪುರ ತಹಶೀಲ್ದಾರ್ಗೆ 2017ರಲ್ಲಿ ಪತ್ರ ಬರೆದಿದ್ದರು.
ಓದಿ: ಮಂಡ್ಯ: ‘ನಿಶ್ಶಬ್ದ ಸ್ಫೋಟ’ದಿಂದ ಅಂತರ್ಜಲ ಕಲುಷಿತ
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಪರಿಸರ ಅನುಮೋದನಾ ಸಮಿತಿ ಬೇಬಿಬೆಟ್ಟದ 30 ಗಣಿ ಕಂಪನಿಗಳಿಗೆ ಪರಿಸರ ಅನುಮೋದನೆ ಮುಂದುವರಿಸಲು ನಿರಾಕರಿಸಿತ್ತು. ಹೀಗಾಗಿ, ಗಣಿ ಮಾಲೀಕರಿಗೆ ಈಗ ನೂರಾರು ಕೋಟಿ ದಂಡ ಕಟ್ಟುವ ಪರಿಸ್ಥಿತಿ ಬಂದೊದಗಿದೆ.
ಕೆಆರ್ಎಸ್ ಮಾರ್ಗದಲ್ಲಿ ಶಿಲಾ ರೇಖೆ
ಲಕ್ಷ್ಮಣ ತೀರ್ಥದಿಂದ ಕೆಆರ್ಎಸ್, ಬೆಂಗಳೂರಿನವರೆಗೆ ಶಿಲಾ ರೇಖೆ (ಮೆಗಾ ಲೀನ್ಯಾಮೆಂಟ್) ಇರುವುದನ್ನು ವಿಜ್ಞಾನಿಗಳು 100 ವರ್ಷದ ಹಿಂದೆಯೇ ಪತ್ತೆ ಮಾಡಿದ್ದಾರೆ. 1995ರಲ್ಲಿ ಚೆನ್ನೈನ ಭೂವಿಜ್ಞಾನಿ ಪ್ರೊ.ರಾಮಸ್ವಾಮಿ ಈ ಬಗ್ಗೆ ಅಧ್ಯಯನ ವರದಿ ಪ್ರಕಟಿಸಿದ್ದಾರೆ. ಹೀಗಾಗಿ, ಈ ಮಾರ್ಗದಲ್ಲಿ ಕಂಪನಗಳು ಘಟಿಸಬಾರದು ಎಂದು ವಿಜ್ಞಾನಿಗಳು ತಿಳಿಸುತ್ತಾರೆ.
‘ಇಸ್ರೋ ವಿಜ್ಞಾನಿಗಳ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಅತೀ ಪ್ರಮುಖವಾದ 3 ಶಿಲಾ ರೇಖೆಗಳಿವೆ. ಈ ಪೈಕಿ ಕೆಆರ್ಎಸ್ ಮಾರ್ಗದ ರೇಖೆ ದೊಡ್ಡದು. ಹೀಗಾಗಿ, ಇಲ್ಲಿ ಗಣಿಗಾರಿಕೆ ನಡೆಸಬಾರದು’ ಎಂದು ಮೈಸೂರು ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ಪಿ.ಬಸವರಾಜಪ್ಪ ತಿಳಿಸಿದರು.
* ಜಿಲ್ಲೆಯಲ್ಲಿ ಒಟ್ಟು ದಂಡದ ಮೊತ್ತ; ₹ 320 ಕೋಟಿ
* ಅದರಲ್ಲಿ ಬೇಬಿಬೆಟ್ಟದಲ್ಲಿ ವಿಧಿಸಲಾಗಿರುವ ದಂಡ; ₹ 280 ಕೋಟಿ
* ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ – 40 ಪ್ರಕರಣದಲ್ಲಿ ಒಟ್ಟು ದಂಡ; ₹ 300
* ಅದರಲ್ಲಿ ದಿಲೀಪ್ ಬಿಲ್ಡ್ ಕಾನ್ ಕಂಪನಿಗೆ; ₹ 102 ಕೋಟಿ
ಇನ್ನಷ್ಟು ಸುದ್ದಿಗಳು
* ಅಕ್ರಮ ಗಣಿಗಾರಿಕೆ: ಸತ್ಯದ ಪರ ನಿಂತಾಗ ಶತ್ರುಗಳು ಹೆಚ್ಚು – ಸುಮಲತಾ ಟ್ವೀಟ್
* ‘ಸುಮಲತಾ ಮಾಟಗಾತಿಯಾ?’: ಶಾಸಕ ರವೀಂದ್ರ ಶ್ರೀಕಂಠಯ್ಯ
* ಡ್ಯಾಂ ಬಿರುಕಿನ ಚರ್ಚೆ: ಸುಳ್ಳುಸುದ್ದಿ ಸೃಷ್ಟಿಸಿದ ಗೊಂದಲ
* ಮಂಡ್ಯ: ಕೈಕುಳಿಯಿಂದ ಮೆಗ್ಗರ್ ಸ್ಫೋಟದವರೆಗೆ ಬೇಬಿಬೆಟ್ಟ!
* ಕನ್ನಂಬಾಡಿ ಬಿರುಕು ವಿಚಾರ; ಸಿಎಂ ಸ್ಪಷ್ಟಪಡಿಸಲಿ–ಎಚ್.ವಿಶ್ವನಾಥ್
* ಕುಮಾರಸ್ವಾಮಿ ವಿರುದ್ಧದ ಟೀಕೆ: ರಾಕ್ಲೈನ್ ವೆಂಕಟೇಶ್ ಮನೆಗೆ ಮುತ್ತಿಗೆ
* ನೀವು ಶಾಸಕರೋ, ಭಯೋತ್ಪಾದಕರೋ: ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಆಕ್ರೋಶ
* ಬೇಬಿಬೆಟ್ಟ: ನಿತ್ಯ 1,200 ಟ್ರಕ್ ಜಲ್ಲಿ ರವಾನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.