ಸುಂಟಿಕೊಪ್ಪ: ಮಾದಾಪುರ ವ್ಯಾಪ್ತಿಯ ಮೂವತ್ತೊಕ್ಲುವಿನ ವ್ಯಕ್ತಿಯೊಬ್ಬರು ಅಂಗಡಿಯಿಂದ ಖರೀದಿಸಿ ತಂದಿದ್ದ ಮೊಟ್ಟೆಯೊಳಗೆ ಕಬ್ಬಿಣದ ಚೂರುಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿದೆ.
ಮೂವತ್ತೊಕ್ಲು ಗ್ರಾಮದ ಮಂಡೀರ ಕಾರ್ಯಪ್ಪ ಶನಿವಾರ ಮಾದಾಪುರದ ಅಂಗಡಿಯೊಂದರಿಂದ 12 ಮೊಟ್ಟೆಗಳನ್ನು ತಂದಿದ್ದಾರೆ. ಅದರಂತೆ ಬುಧವಾರ ರಾತ್ರಿ ಈ ಮೊಟ್ಟೆಗಳನ್ನು ಬೇಯಿಸಿ ತಿನ್ನುವ ವೇಳೆ ಗಟ್ಟಿಯಾದ ಚೂರು ಸಿಕ್ಕಿದೆ. ಅದನ್ನು ಗಮನಿಸಿದಾಗ ಅದರೊಳಗೆ ಸಣ್ಣದೊಂದು ಕಬ್ಬಿಣದ ಚೂರು ಇರುವುದು ಕಂಡು ಆತಂಕಗೊಂಡಿದ್ದಾರೆ.
ವಿಷಯ ಅರಿತ ಪಕ್ಕದ ಮನೆ ನವೀನ್ ಗುರುವಾರ ಬೆಳಿಗ್ಗೆ ಉಳಿದ ಮೊಟ್ಟೆಗಳನ್ನು ಪರೀಕ್ಷಿಸಿದಾಗ ದೊಡ್ಡ ಕಬ್ಬಿಣದ ಚೂರುಗಳು ಕಾಣಿಸಿಕೊಂಡಿವೆ. ಉಳಿದ ಮೊಟ್ಟೆಗಳನ್ನು ಪರೀಕ್ಷಿಸಿದಾಗ ಅದರೊಳಗೆ ಶಬ್ದಗಳು ಬರುತ್ತಿದ್ದು, ಬೇಯಿಸಿದ ಮೊಟ್ಟೆಗಳೆಲ್ಲವೂ ರಬ್ಬರ್ನಂತೆ ಗೋಚರಿಸಿವೆ.
ಈಗಾಗಲೇ ಕಾರ್ಯಪ್ಪ ಅವರು ಆಹಾರ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದು, ಮೊಟ್ಟೆಗಳನ್ನು ಪರೀಕ್ಷೆಗೆ ಒಳಪಡಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.