ಹೊಸದುರ್ಗ: ‘9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ‘ಭಕ್ತಿ ಪಂಥ’ ಪಾಠದಲ್ಲಿದ್ದ ಕನಕದಾಸರ ಕುರಿತ ಒಂದು ಪುಟದಷ್ಟು ಮಾಹಿತಿಯನ್ನು ಪಠ್ಯ ಪರಿಷ್ಕರಣೆಯಲ್ಲಿ ಕೇವಲ ಒಂದು ಸಾಲಿಗೆ ಸೀಮಿತಗೊಳಿಸಲಾಗಿದೆ’ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನಕದಾಸರ ಮಾಹಿತಿ ಕಡಿತಗೊಳಿಸಿರುವ ಬಗ್ಗೆ ಕಾರಣ ಕೇಳಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾಗಿ ಸ್ವಾಮೀಜಿ ಹೇಳಿದ್ದಾರೆ
‘ಜಾತೀಯತೆಯನ್ನು ಹೋಗಲಾಡಿಸಲು 16ನೇ ಶತಮಾನದಲ್ಲಿ ಕನಕದಾಸರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಕೀರ್ತನೆಗಳ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನಕದಾಸರ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿ ನೀಡದಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.
‘ಕೂಡಲೇ ಶಿಕ್ಷಣ ಸಚಿವರಿಗೆ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯವರಿಗೆ ಸೂಚನೆ ನೀಡಿ, ಕನಕದಾಸರ ಬಗ್ಗೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ರಚಿಸಿದ್ದ ಪಠ್ಯವನ್ನೇ ಮುಂದುವರಿಸಬೇಕು’ ಎಂದೂ ಮನವಿ ಮಾಡಿದ್ದಾರೆ.