ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಸುರಪುರ ಶಾಸಕ ರಾಜೂಗೌಡ ಮತ್ತು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದೆ ಅಳಲು ತೋಡಿಕೊಂಡು ಭಾವುಕರಾಗಿದ್ದಾರೆ.
ಸಚಿವ ಸ್ಥಾನ ಕೈತಪ್ಪಿರುವುದು ಖಚಿತವಾದಂತೆ ಯಡಿಯೂರಪ್ಪ ಅವರ ನಿವಾಸ ಕಾವೇರಿಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಈ ಇಬ್ಬರು, ಎರಡು ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದ್ದಾರೆ. ಮಾತುಕತೆ ವೇಳೆ ಭಾವುಕರಾದ ರೇಣುಕಾಚಾರ್ಯ, ಒಂದು ಹಂತದಲ್ಲಿ ಗದ್ಗದಿತರಾಗಿ ಕಣ್ಣೀರಿಟ್ಡಿದ್ದಾರೆ.
‘ನಾನು ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಆದರೂ ಸಚಿವ ಸ್ಥಾನ ಕೈತಪ್ಪಿರುವುದು ಯಾಕೆ. ನಾನು ಮಾಡಿರುವ ತಪ್ಪಾದರೂ ಏನು. ಪಕ್ಷ ವಿರೋಧಿಗಳ ವಿರುದ್ಧ ಹೋರಾಟ ಮಾಡಿದ್ದೇ ತಪ್ಪೇ’ ಎಂದು ಯಡಿಯೂರಪ್ಪ ಮುಂದೆ ಭಾವುಕರಾಗಿ ರೇಣುಕಾಚಾರ್ಯ ಮಾತನಾಡಿದ್ದಾರೆ.