ಚಿಕ್ಕಮಗಳೂರು: ‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಬಿ.ಎಸ್.ಯಡಿಯೂರಪ್ಪ ಅವರು ಆ ಕುರ್ಚಿಯಲ್ಲಿ ಇದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉತ್ತರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಅದನ್ನೇ ಹೇಳಿದ್ದಾರೆ. ಹೀಗಾಗಿ, ಆ ವಿಷಯದ ಬಗ್ಗೆ ಮಾತನಾಡುವುದೇ ಅಪ್ರಸ್ತುತ’ ಎಂದು ಪ್ರತಿಕ್ರಿಯಿಸಿದರು.
‘ಸರ್ಕಾರವು ಜನಜೀವನ, ಜೀವ ಉಳಿಸುವಿಕೆ ಇವೆರಡನ್ನು ಸಮತೋಲನದಿಂದ ಪರಿಗಣಿಸುತ್ತಿದೆ. ಕೋವಿಡ್ ದೃಢ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇರುವ ಕಡೆಗಳಲ್ಲಿ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆಗೆ ಕ್ರಮ ವಹಿಸುತ್ತೇವೆ. ಪ್ರಮಾಣ ಜಾಸ್ತಿ ಇರುವ ಕಡೆಗಳಲ್ಲಿ ಕಠಿಣ ಕ್ರಮಗಳು ಮುಂದುವರಿಯಲಿವೆ’ ಎಂದು ತಿಳಿಸಿದರು.