ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಟಿಸುವ 8 ಉತ್ಪನ್ನ ಲೋಕಾರ್ಪಣೆ

Last Updated 6 ಆಗಸ್ಟ್ 2020, 9:08 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ 19 ವಿರುದ್ಧ ಹೋರಾಡಲು ಅತ್ಯಂತ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಹಾಗೂ ವೈರಾಣು ಹರಡುವಿಕೆ ತಹಬಂದಿಗೆ ತರಲು ಪೂರಕವಾದ 8 ವಿವಿಧ ಉತ್ಪನ್ನಗಳನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ಬಿಡುಗಡೆ ಮಾಡಿದರು.

ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್‌), ವ್ಯಾಪ್ತಿಯ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರದಲ್ಲಿ (ಬಿಬಿಸಿ- ಬೆಂಗಳೂರು ಬಯೊ ಇನ್ನೋವೇಷನ್‌ ಕೇಂದ್ರ) ಅಭಿವೃದ್ಧಿಪಡಿಸಿರುವ ಈ ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಬಿಡುಗಡೆ ಮಾಡಲಾಯಿತು.

ಪದ್ಮ ವೈಟಲ್ಸ್, ಮಲ್ಲೀಸ್ ಕಾರ್ಡಿಟೀ: ಸಿಡಿ4 ಷೀಲ್ಡ್, ಭೀಮ್ ರೋಟಿ, ಇಮ್ಯೂನ್ ಬೂಸ್ಟರ್- ಡೈಲಿ ಡ್ರಾಪ್ಸ್, ವೆಜ್ ಫಲ್ ಸ್ಯಾನಿಟೈಸರ್, ವಾಟರ್ ಸ್ಯಾನಿಟೈಸರ್, ಆಂಟಿ- ಮೈಕ್ರೋಬಿಯಲ್ ಎಚ್ ವಿಎಸಿ ಮಾಡ್ಯೂಲ್ ಇವು ಅಭಿವೃದ್ಧಿಗೊಂಡಿರುವ ವಿವಿಧ ಉತ್ಪನ್ನಗಳಾಗಿವೆ.

ಬಿಬಿಸಿ ಕೇಂದ್ರದಲ್ಲಿ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳ ನವೋದ್ಯಮಿಗಳು ಈ ರೀತಿಯ ಹೊಸ ರೀತಿಯ ಆವಿಷ್ಕಾರಗಳನ್ನು ಮಾಡುತ್ತಿದ್ದು, ಅವು ಕೋವಿಡ್‌ ವಿರುದ್ಧ ಹೋರಾಡಲು ನೆರವಾಗುತ್ತಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಈ ನಿಟ್ಟಿನಲ್ಲಿ ಮಹತ್ವದ ವೇದಿಕೆಯನ್ನು ಕಲ್ಪಿಸುತ್ತಿದ್ದು, ದೇಶದಲ್ಲಿಯೇ ಮಾದರಿಯಾದಂತಹ ಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಬಿಸಿ ಪ್ರದರ್ಶನ ಮೇಳದಲ್ಲಿ ಈ ಮುಂಚೆಯೇ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿರುವ ಪಟ್ಟಿಗೆ ಈ ಹೊಸ ಉತ್ಪನ್ನಗಳು ಹಾಗೂ ತಾಂತ್ರಿಕ ನಮೂನೆಗಳು ಕೂಡ ಸೇರಿಕೊಂಡಂತಾಗಿವೆ. ಕೋವಿಡ್ 19 ಮಹಾಸೋಂಕಿನ ವಿರುದ್ಧ ಹೋರಾಡಬಲ್ಲ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಸದೃಢ ಆವಿಷ್ಕಾರಿ ವಾತಾವರಣದಿಂದಾಗಿ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸೂಕ್ತ ಸಮಯದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇಂತಹ ಇನ್ನಷ್ಟು ತಾಂತ್ರಿಕತೆ ಮತ್ತು ಉತ್ಪನ್ನಗಳು ಬಿಡುಗಡೆಗೊಳ್ಳುವ ಹಂತದಲ್ಲಿವೆ ಎಂದು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಛೇರ್ ಮ್ಯಾನ್ ಡಾ.ಇ.ವಿ.ರಮಣ ರೆಡ್ಡಿ ಹೇಳಿದರು.

ಬಿಬಿಸಿಯಂತಹ ಬಯೋ-ಇನ್ ಕ್ಯುಬೇಟರ್‌ನಲ್ಲಿ ಈ ಉತ್ಪನ್ನಗಳು ಅಭಿವೃದ್ಧಿಗೊಂಡಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ' ಕರೆಗೆ ಸ್ಟಾರ್ಟ್ ಅಪ್‌ಗಳು ಪೂರಕವಾಗಿ ಸ್ಪಂದಿಸಿರುವುದನ್ನು ಸೂಚಿಸುತ್ತದೆ. ಬಿಬಿಸಿ ಹಾಗೂ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂ) ನಡುವಿನ ಸಹಯೋಗವು ಈ ಉತ್ಪನ್ನಗಳ ಹೆಚ್ಚಿನ ತಯಾರಿಕೆ, ಮಾರುಕಟ್ಟೆ ವಿಶ್ಲೇಷಣೆ ಹಾಗೂ ಅಧಿಕ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಬೇಕು ಎಂದ ಕೇಂದ್ರ ಸರ್ಕಾರದ ಪ್ರಧಾನ ಸಲಹೆಗಾರ ಪ್ರೊ.ವಿಜಯ್ ರಾಘವನ್ ಅಭಿಪ್ರಾಯಪಟ್ಟರು. ಇವರು ದೆಹಲಿಯಿಂದ ಜೂಮ್ ನಲ್ಲಿ ಹಾಜರಾಗಿದ್ದರು.

ಪರಸ್ಪರ ತಿಳಿವಳಿಕೆ ಒಪ್ಪಂದ: ಇದೇ ಸಂದರ್ಭದಲ್ಲಿ ಬೆಂಗಳೂರು ಐಐಎಂ ಮತ್ತು ಬಿಬಿಸಿ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಐಐಎಂ ಪರವಾಗಿ ಡೀನ್ ಪ್ರೊ.ಕೆ.ಕುಮಾರ್ ಅವರು ಸಹಿ ಹಾಕಿ ಮಾತನಾಡಿ, ಈ ಒಪ್ಪಂದವು ಸ್ಟಾರ್ಟ್ ಅಪ್ ಗಳಿಗೆ ದೊಡ್ಡ ವಹಿವಾಟು ನಡೆಸಲು ಅನುವು ಮಾಡಿಕೊಡಲಿದೆ ಎಂದರು. ಈ ಒಪ್ಪಂದವು ಬೆಂಗಳೂರಿನಲ್ಲಿ ಉದ್ಯಮ ಪೂರಕ ವಾತಾವರಣ ನಿರ್ಮಿಸುವ ದಿಸೆಯಲ್ಲಿ ಒಂದು ಮಹತ್ವದ ಮೈಲುಗಲ್ಲು ಎಂದು ಬಿಬಿಸಿ ವ್ಯವಸ್ಥಾಪಕ ನಿರ್ದೇಶಕರು ಅಭಿಪ್ರಾಯಪಟ್ಟರು.
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ನಿರ್ದೇಶನಾಲಯದ ನಿರ್ದೇಶಕಿ ಹಾಗೂ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್ ಇದ್ದರು.

ಅಭಿವೃದ್ಧಿಗೊಂಡಿರುವ ಉತ್ಪನ್ನಗಳ ವಿವರ:

1) ಪದ್ಮ ವೈಟಲ್ಸ್ + : ಕಾರ್ಡಿಯಾಕ್ ಡಿಜೈನ್ ಲ್ಯಾಬ್ಸ್ ನ ಡಾ.ಮದನ್ ಗೋಪಾಲ್ ಈ ಕೇಂದ್ರೀಕೃತ ಆರೋಗ್ಯ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಯ ಇಸಿಜಿ, ಉಸಿರಾಟ, ಎಸ್ ಪಿಒ 2 ಮತ್ತು ದೇಹದ ಉಷ್ಣತೆ ಮೇಲೆ ನಿರಂತರವಾಗಿ ನಿಗಾ ಇರಿಸುವ ಜೊತೆಗೆ ಆ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಟೆಲಿಮೆಟ್ರಿ ಮೂಲಕ ರವಾನಿಸುತ್ತದೆ. ಮುನ್ನೆಚ್ಚರಿಕೆ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ರೋಗಿಗಳ ಶರೀರವನ್ನು ಮುಟ್ಟದೇ ನಿಗಾ ವಹಿಸಲು ಅನುವು ಮಾಡಿಕೊಡುತ್ತಾದ್ದರಿಂದ ಕೋವಿಡ್ 19 ಸೋಂಕಿನ ಚಿಕಿತ್ಸೆ ಸಂದರ್ಭದಲ್ಲಿ ಬಹಳ ಉಪಯುಕ್ತವಾಗುತ್ತದೆ. ಇದನ್ನು ನಾರಾಯಣ ಹೃದಯಾಲಯದಲ್ಲಿ ದೃಢೀಕರಿಸಲಾಗಿದೆ.

ಐಸಿಯು ಪೇಷೆಂಟ್ ಮಾನಿಟರ್ ಒದಗಿಸುವ ಬಹುತೇಕ ಅಂಶಗಳು ಇದರಲ್ಲಿವೆ. ಇದನ್ನು ಬಳಸಿ ಯಾವುದೇ ಸಾಮಾನ್ಯ ಹಾಸಿಗೆಯನ್ನು ಮಾನಿಟರ್ಡ್ ಬೆಡ್ ಆಗಿ ಬದಲಾಯಿಸಬಹುದು. ಬೆಲೆ ಕಡಿಮೆ ಇದ್ದು ಹಗುರವಾಗಿರುವುದರಿಂದ ರೋಗಿಯ ಮೇಲಿಡುವ ನಿಗಾ ಸಾಮರ್ಥ್ಯ ಹೆಚ್ಚಾಗುತ್ತದೆ. ರೋಗಿಯ ಇಸಿಜಿ, ಉಸಿರಾಟ, ಎಸ್ ಪಿಒ2, ಮತ್ತು ದೇಹದ ಉಷ್ಣತೆಯನ್ನು ದಾಖಲಿಸಲು ಬೇಕಾಗುವ ನರ್ಸ್ ಗಳ ಸಂಖ್ಯೆಯನ್ನು ತಗ್ಗಿಸುತ್ತದೆ. ಜೊತೆಗೆ, ರೋಗಿಯನ್ನು ಮುಟ್ಟದೇ ಶರೀರದ ನಿರ್ಧಾರಕ ಅಂಕಿ-ಅಂಶಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುವುದರಿಂದ ಸೋಂಕಿನ ಸಾಧ್ಯತೆಯನ್ನು ತಡೆಗಟ್ಟುತ್ತದೆ ಎಂಬುದು ತಯಾರಕರ ಹೇಳಿಕೆ.

2) ಮಲ್ಲೀಸ್ ಕಾರ್ಡಿಟೀ: ರೋಗ ನಿರೋಧಕ ಶಕ್ತಿ ಉದ್ದೀಪಕವಾದ ಇದನ್ನು ಮಲ್ಲಿಪಾತ್ರ ನ್ಯೂಟ್ರಾಸ್ಯೂಟಿಕಲ್ಸ್ ನ ಡಾ.ಮೌಷ್ಮಿ ಮೊಂಡಲ್ ಅಭಿವೃದ್ಧಿಪಡಿಸಿದ್ದಾರೆ. ಔಷಧೀಯ ಗುಣವುಳ್ಳ ಅಣಬೆಯಾದ “ಕಾರ್ಡಿಸೆಪ್ಸ್” ಬಳಸಿ ಇದನ್ನು ತಯಾರಿಸಲಾಗಿದೆ. ಪ್ರಯೋಗಾಲಯ ಪರಿಸ್ಥಿತಿಗಳಲ್ಲಿ ಬೆಳೆಯಲಾಗುವ ಈ ಅಣಬೆ ತಳಿಯು ವೈರಾಣು ನಿರೋಧಕ ಗುಣಸ್ವಭಾವಗಳನ್ನು ಹೊಂದಿರುತ್ತದೆ. ಕೋವಿಡ್ 19 ಸನ್ನಿವೇಶದಲ್ಲಿ ಇದು ವ್ಯಕ್ತಿಯ ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸಲು ಸಹಾಯಕ. ಇದು ಪೇಟೆಂಟ್ ಹೊಂದಿದ್ದು (ಪೇಟೆಂಟ್ ಅರ್ಜಿಗಳ ಸಂಖ್ಯೆ 201941046996 & 201941046997) FSSAI ನಿಂದ ಅನುಮೋದನೆಗೊಂಡಿದೆ.

ಈ ಕಾರ್ಡಿಯೋಸೆಪ್ ಗಳ ಸಕ್ರಿಯ ಸಂಯೋಜನೆಯು ನೈಸರ್ಗಿಕವಾಗಿ ಬೆಳೆದ ಕಾರ್ಡಿಯೋಸೆಪ್ ಗಳಂತೆಯೇ ಇರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಇದು ದೇಹದಲ್ಲಿ ಸಕ್ಕರೆ ಹಾಗೂ ಕೊಲೆಸ್ಟೆರಾಲ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುತ್ತದೆ. ದೇಹದಲ್ಲಿನ ನಂಜುಕಾರಕಗಳನ್ನು ನಿವಾರಿಸಿ ದೇಹ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದನ್ನು 2-3 ಗ್ರಾಂ ಬಳಸಿ 15 ದಿನಗಳ ಕಾಲ ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು.

ವಿನೂತನ ವಿಧಾನ ಬಳಸಿ ಇದರ ಸಕ್ರಿಯ ಘಟಕಾಂಶವನ್ನು 20 ಮಿ.ಗ್ರಾಂ./ ಗ್ರಾಂಗೆ ಸಂವರ್ಧಿಸಲಾಗಿದೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ ಇದು ಅತ್ಯುತ್ತಮ ಫಲಿತಾಂಶ ನೀಡಿದೆ. ಬೆಲೆ 30 ಗ್ರಾಂ ಗೆ ₹ 2400/-

3) ಸಿಡಿ4 ಷೀಲ್ಡ್: ಬಾಯಲ್ಲಿರಿಸಿಕೊಂಡು ಚೀಪಬಹುದಾದ ಈ ಟ್ಯಾಬ್ಲೆಟ್ ಅನ್ನು ಸ್ಟೇಬಿಕಾನ್ ಕಂಪನಿಯ ಡಾ.ವಿಜಯ್ ಲಂಕಾ ಮತ್ತು ತಂಡದವರು ಅಭಿವೃದ್ಧಿಪಡಿಸಿದ್ದಾರೆ. ಇದು ಉರಿಯೂತ ಮತ್ತು ಸೋಂಕಿನ ವಿರುದ್ಧ ಹೋರಾಡುವ ಕ್ಯೂರ್ ಕ್ಯುಮಿನ್ ಮತ್ತು ವಿಟಮಿನ್ ಬಿ 12 ಅನ್ನು ಒಳಗೊಂಡಿರುತ್ತದೆ. ದೇಹದೊಳಗೆ ವೈರಾಣು ಬೀರುವ ಪ್ರಭಾವಕ್ಕೆ ಅನುಗುಣವಾಗಿ CD4+, CD8+ ಮತ್ತು IFN ಗಳನ್ನು ಸಕ್ರಿಯಗೊಳಿಸುವ ಮೂಲಕ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿಯನ್ನು ಉತ್ತೇಜನಗೊಳಿಸುತ್ತದೆ. ಇದು ರೋಗ ನಿರೋಧಕತೆಯನ್ನು ಮಾರ್ಪಾಡುಗೊಳಿಸುವ ಗುಣಸ್ವಭಾವಗಳನ್ನು ಹೊಂದಿರುವುದರ ಜೊತೆಗೆ ವೈರಾಣು ಸೋಂಕಿಗೆ ಪ್ರತಿಕ್ರಿಯೆಯಾಗಿ ಸೈಟೋಕೈನ್ ದಾಳಿಯನ್ನು ತಗ್ಗಿಸುತ್ತದೆ. ಇದು FSSAI (ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣಗಳ ಪ್ರಾಧಿಕಾರ)ನಿಂದ ಅನುಮೋದನೆಗೊಂಡಿದೆ.

4) ಭೀಮ್ ರೋಟಿ: ಚಪಾತಿ ರೂಪದಲ್ಲಿರುವ ಈ ರೋಗ ನಿರೋಧಕ ಉದ್ದೀಪಕವನ್ನು ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರು ಅಭಿವೃದ್ಧಿಪಡಿಸಿದ್ದಾರೆ. ಆಯುಷ್ ಸಚಿವಾಲಯವು ಶಿಫಾರಸು ಮಾಡಿದ ಗಿಡಮೂಲಿಕೆಗಳ ಮಿಶ್ರಣಗಳನ್ನು ಒಳಗೊಂಡಿರುವುದು ಇದರ ವಿಶೇಷ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ಇದು, ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಈ ಚಪಾತಿಗಳು ಹೆಚ್ಚಿನ ಬಾಳಿಕೆ ಅವಧಿಯನ್ನು ಹೊಂದಿದ್ದು, ಸಂಗ್ರಹಿಸಿಡುವುದು ಕೂಡ ಸುಲಭವಾಗಿದೆ. FSSAI ನಿಂದ ಅನುಮೋದನೆಗೊಂಡಿರುವ ಈ ಉತ್ಪನ್ನದ ಪೇಟೆಂಟ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

ಪ್ರತಿಯೊಂದು ಚಪಾತಿ 40 ಗ್ರಾಂ ಇದ್ದು, 200 ಮೈಕ್ರೋಗ್ರಾಂ ಗಿಡಮೂಲಿಕೆ ಸಾರವನ್ನು ಒಳಗೊಂಡಿರುತ್ತದೆ. ಇದು “ರೆಡಿ ಟು ಈಟ್” ಆಗಿದ್ದು, ತವಾ ಮೇಲೆ ಬಿಸಿ ಮಾಡಿಕೊಂಡು ತಿನ್ನಬಹುದು. ಕೊಠಡಿ ತಾಪಮಾನದಲ್ಲಿ 6 ತಿಂಗಳು ಬಾಳಿಕೆ ಅವಧಿ ಹೊಂದಿರುತ್ತದೆ. ಶುಂಠಿ, ಕರಿಮೆಣಸು, ಅರಿಶಿನ, ಲವಂಗ, ಕಪ್ಪು ಜೀರಿಗೆ, ಜೀರಿಗೆಗಳ ಮಿಶ್ರಣದಿಂದ ಹೊರತೆಗೆಯಲಾದ ಸಾರ ಇದರಲ್ಲಿರುತ್ತದೆ. ಇದಕ್ಕೆ ಯಾವುದೇ ಪ್ರಿಸರ್ವೇಟಿವ್ ಬಳಸುವುದಿಲ್ಲ. ಜೊತೆಗೆ ಬೇಯಿಸಿದ ನಂತರವೂ ಇದರ ಸಕ್ರಿಯ ಘಟಕಾಂಶಗಳು ಸತ್ವ ಕಳೆದುಕೊಳ್ಳುವುದಿಲ್ಲ ಎಂಬುದು ತಯಾರಕರ ವಿವರಣೆ.

5) ಇಮ್ಯೂನ್ ಬೂಸ್ಟರ್- ಡೈಲಿ ಡ್ರಾಪ್ಸ್: ರೋಗ ಪ್ರತಿರೋಧ ಶಕ್ತಿ ಉದ್ದೀಪಿಸುವ ಈ ಹನಿಯನ್ನು ಕೂಡ ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರೇ ಅಭಿವೃದ್ಧಿಪಡಿಸಿದ್ದಾರೆ. ಇದು ಸಹ ಆಯುಷ್ ಸಚಿವಾಲಯ ಶಿಫಾರಸು ಮಾಡಿರುವ ಗಿಡಮೂಲಿಕೆ ಮಿಶ್ರಣಗಳನ್ನು ಒಳಗೊಂಡಿದೆ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ಇದು, ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಒಂದು ಲೋಟ ಬಿಸಿ ನೀರಿಗೆ ಇದರ ಒಂದೇ ಒಂದು ಹನಿಯನ್ನು ಸೇರಿಸುವ ಮೂಲಕ ಈ ಪರಿಣಾಮವನ್ನು ಪಡೆಯಬಹುದಾಗಿದೆ. ಇದೂ ಸಹ FSSAI ನಿಂದ ಅನುಮೋದನೆಗೊಂಡಿದೆ.

250 ಮಿ.ಲೀ. ಬಿಸಿ ನೀರು ಹಾಗೂ 100 ಮಿ.ಲೀ. ಹಾಲಿಗೆ ಸೇರಿಸಿಕೊಂಡು ಕುಡಿಯಬಹುದು. ಇದರ ಬಾಳಿಕೆ ಅವಧಿ 3 ವರ್ಷಗಳು. ಇದು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಒಪ್ಪಿತವಾದ “ಗೋಲ್ಡನ್ ಮಿಲ್ಕ್”ನ ಸುಧಾರಿತ ರೂಪವೂ ಆಗಿದೆ. ಅರಿಶಿನ, ಶುಂಠಿ, ಕಪ್ಪು ಜೀರಿಗೆ, ಜೀರಿಗೆ, ಲವಂಗ, ಕರಿ ಮೆಣಸಿನ ಸಕ್ರಿಯ ಘಟಕಾಂಶಗಳನ್ನು ಇದು ಒಳಗೊಂಡಿದೆ ಎಂಬುದು ಕಂಪನಿಯ ವಿವರಣೆ.

6) ವೆಜ್ ಫಲ್= ಹಣ್ಣು ಮತ್ತು ತರಕಾರಿ ಸ್ಯಾನಿಟೈಸರ್; ಕ್ರಿಮ್ಮಿ ಬಯೋಟೆಕ್ ನ ದೀಪಕ್ ಭಜಂತ್ರಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಮೈಕ್ರೋಬ್ ಗಳ (ಸೂಕ್ಷ್ಮಾಣುಜೀವಿಗಳ) ವಿರುದ್ಧ ಪರಿಣಾಮಕಾರಿಯಾದ ಮತ್ತು ಕೀಟನಾಶಕಗಳನ್ನು ಹೊರಸೆಳೆಯಬಲ್ಲ ಈ ಸ್ಯಾನಿಟೈಸರ್ ಅನ್ನು ಖಾದ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಕ್ಲೋರಿನ್ ಹಾಗೂ ಆಲ್ಕೋಹಾಲ್ (ಮದ್ಯಸಾರ) ಮುಕ್ತ ಎಂಬುದು ಗಮನಾರ್ಹ ಅಂಶ.

1 ಲೀಟರ್ ನೀರಿಗೆ 10 ಮಿ.ಲೀ. ದ್ರಾವಣ ಹಾಕಿ ಅದರಲ್ಲಿ 3 ನಿಮಿಷ ಕಾಲ ಹಣ್ಣು ಮತ್ತು ತರಕಾರಿಗಳನ್ನು ನೆನೆಸಬೇಕು. ನಂತರ, ಕೈಯಿಂದ ಹಣ್ಣು ಹಾಗೂ ತರಕಾರಿಗಳನ್ನು ಉಜ್ಜಿ ಹೊರತೆಗೆದು ಅವನ್ನು ಬಳಕೆ ಯೋಗ್ಯ ನೀರಿನಿಂದ ತೊಳೆಯಬೇಕು. ಇದು ಹಣ್ಣು ಹಾಗೂ ತರಕಾರಿಗಳನ್ನು ವೈರಾಣು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ ಎನ್ನಲಾಗಿದೆ. ಬೆಲೆ 500 ಮಿ.ಲೀ.ಗೆ ರೂ 150/-

7) ವಾಟರ್ ಸ್ಯಾನಿಟೈಸರ್- ಕಿಚನ್ ಟ್ಯಾಪ್: ಯುವಿ ಪ್ಯೂರಿಫೈಯರ್ ನ ಕಿರುರೂಪವಾದ ಇದನ್ನು ಬಯೋಫೈ ಕಂಪನಿಯ ರವಿಕುಮಾರ್ ಅವರು ಅಭಿವೃದ್ಧಿಪಡಿಸಿದ್ದಾರೆ. ನೀರಿನ ನಲ್ಲಿಗೆ ಇದನ್ನು ಅಳವಡಿಸಬಹುದು. ಫೇಜಸ್ ನಂತಹ ವೈರಾಣು ಸೇರಿದಂತೆ ಶೇ 99ರಷ್ಟು ಮೈಕ್ರೋಬ್ ಗಳನ್ನು ಇದು ಯಶಸ್ವಿಯಾಗಿ ಕೊಲ್ಲಲಿದೆ.

8) ಆಂಟಿ- ಮೈಕ್ರೋಬಿಯಲ್ ಎಚ್ ವಿಎಸಿ ಮಾಡ್ಯೂಲ್: HVAC ಸಿಸ್ಟಮ್ ಗೆ ಅಳವಡಿಸಬಹುದಾದ ಈ ಮಾಡ್ಯೂಲ್ (ಘಟಕ) ಅನ್ನು ಬಯೋಫೈ ನ ರವಿ ಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ಒಳಬರುವ ಗಾಳಿಯನ್ನು ನಿರ್ಮಲಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಪ್ರದೂಷಣೆಯಿಂದ ಕೂಡಿರುವ ಸಾಧ್ಯತೆಯಿರುವ ಹವಾನಿಯಂತ್ರಿತ ಗಾಳಿ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇದು ಸಹಕಾರಿ. ಹೀಗಾಗಿ, ಕೋವಿಡ್ 19 ಸನ್ನಿವೇಶದಲ್ಲಿ ಇದರಿಂದ ಹೆಚ್ಚಿನ ಉಪಯೋಗವಿದೆ. ಯುವಿ=ಟೈಟಾನಿಯಂ ಡೈಯಾಕ್ಸೈಡ್ ತಾಂತ್ರಿಕತೆ ಆಧರಿಸಿ ಇದನ್ನು ರೂಪಿಸಲಾಗಿದೆ. ಪೇಟೆಂಟ್ ಹೊಂದಿರುವ ಈ ಉತ್ಪನ್ನವು ದೃಢೀಕರಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT