ಬೆಂಗಳೂರು: ‘ನಾನು ಹೊನ್ನಾಳಿಯ ಮಧ್ಯಕರ್ನಾಟಕ ಭಾಗದವನು. ಉತ್ತರ ಕರ್ನಾಟಕವನ್ನು ಗೌರವಿಸುತ್ತೇನೆ. ನಾನು ಹೊನ್ನಾಳಿಯ ಅಂಜದ ಗಂಡು’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ವಿನಾ ಕಾರಣ ಪಕ್ಷ, ನಾಯಕರ ಬಗ್ಗೆ ಮಾತನಾಡಬಾರದು. ಪಕ್ಷ ತಾಯಿ ಸಮಾನ. ನಾನು ತಾಯಿಯನ್ನು ಗೌರವಿಸುತ್ತೇನೆ. ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಹೋರಾಟದಿಂದಲೇ ಬಂದು ಈಗ ಮುಖ್ಯಮಂತ್ರಿ ಆಗಿದ್ದಾರೆ’ ಎಂದರು.
‘ಹಾಗೆಂದು ಯಡಿಯೂರಪ್ಪ ಪರವಾಗಿಯೂ ಬ್ಯಾಟಿಂಗ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ಳದೆ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಯಾರಿಗೂ ಹೆದರುವವನು ಅಲ್ಲ. ಯಾರನ್ನೂ ಹೆದರಿಸಿಲ್ಲ’ ಎಂದೂ ಹೇಳಿದರು.
ಯತ್ನಾಳ್ ಹೆಸರು ಪ್ರಸ್ತಾಪಿಸದೆ ಮಾತನಾಡಿದ ರೇಣುಕಾಚಾರ್ಯ, ‘ಹೊನ್ನಾಳಿಯ ಹೊಡೆತ ಇಡೀ ರಾಜ್ಯಕ್ಕೆ ಗೊತ್ತು. ವರ್ಷಕ್ಕೆ ಎರಡು ಬಾರಿ ಕುಸ್ತಿ ನಡೆಯುತ್ತದೆ. ಅದೂ ದೊಡ್ಡಮಟ್ಟದಲ್ಲಿ ನಡೆಯುತ್ತದೆ’ ಎಂದು ಕುಟುಕಿದರು.