ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಅವಮಾನಿಸಿ ನಮ್ಮ ತಲೆಗೆ ಕಟ್ಟಲು ಹೊರಟ ಕಾಂಗ್ರೆಸ್ ನಾಟಕ ಬಯಲು: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸಿ ನಮ್ಮ ತಲೆಗೆ ಕಟ್ಟಲು ಹೊರಟ ಕಾಂಗ್ರೆಸ್ ನಾಟಕ ಬಯಲಾಗಿದೆ ಎಂದು ಬಿಜೆಪಿ ಮಂಗಳವಾರ ಹೇಳಿದೆ.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು ಅವರನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ದೂರಿತ್ತು. ಇದಕ್ಕೆ ಉತ್ತರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕುವೆಂಪು ಕುರಿತು ಪಠ್ಯದಲ್ಲಿ ಉಲ್ಲೇಖಿಸಿರುವ ವಿಚಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿದ್ದು ಎಂದು ತಿರುಗೇಟು ನೀಡಿದೆ.

‘ಅದೇ ಶಬ್ದ, ಅವೇ ವಾಕ್ಯ, ಅವೇ ಸಾಲು! ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಕುವೆಂಪು ಅವರ ಕುರಿತು ಕಾಂಗ್ರೆಸ್ ಅವಧಿಯಲ್ಲಿ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿತ್ತು. ತಮ್ಮದೇ ಸರ್ಕಾರದ ಅವಧಿಯಲ್ಲಿ ತಾವೇ ನೇಮಿಸಿದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪು ಅವರನ್ನು ಶಬ್ದಗಳಲ್ಲಿ ಅವಮಾನಿಸಿತ್ತು. ಅದನ್ನೀಗ ಬಿಜೆಪಿ ತಲೆಗೆ ಕಟ್ಟುವ ವ್ಯರ್ಥ ಪ್ರಲಾಪದಲ್ಲಿ ಕಾಂಗ್ರೆಸ್ ತೊಡಗಿರುವುದು ಹಾಸ್ಯಾಸ್ಪದ. ಸಿದ್ದರಾಮಯ್ಯ ಕಾಲದಲ್ಲಿ ಆಗದ ಅವಮಾನ ಈಗ ಹೇಗೆ?’ ಎಂದು ಬಿಜೆಪಿ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್‌ ಬೊಬ್ಬಿಡುತ್ತಿದೆ. ಕಾಂಗ್ರೆಸ್‌ ನೇಮಿಸಿದ ಬರಗೂರು ತಂಡ, ಕುವೆಂಪು ಅವರ ಎರಡು ಅತ್ಯುತ್ತಮ ಬರಹಗಳನ್ನು ಪಠ್ಯಗಳಿಂದ ಕೈಬಿಟ್ಟಿತ್ತು. ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಯಾರು?’ ಎಂದು ಬಿಜೆಪಿ ಕೇಳಿದೆ.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯವನ್ನು ಪಠ್ಯದಿಂದಲೇ ತೆಗೆದು ಹಾಕಿತ್ತು. ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌ ಎನ್ನುವುದರಲ್ಲಿ ಅನುಮಾನವಿದೆಯೇ? ಕಾಂಗ್ರೆಸ್‌ ಸರ್ಕಾರ ರಾಷ್ಟ್ರಕವಿ ಕುವೆಂಪು ಬರೆದ ‘ಅನಲೆ’ ಎಂಬ ನಾಟಕ, ‘ಅಜ್ಜಯ್ಯನ ಅಭ್ಯಂಜನ’ ಎಂಬ ಸುಂದರ ಲಲಿತ ಪ್ರಬಂಧ ಕೈಬಿಟ್ಟಿತ್ತು. ‘ಬಹುಮಾನ’ ಎಂಬ ಅರ್ಥಪೂರ್ಣ ಕವಿತೆ ಹಾಗೂ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಎಂಬ ಶಿಶು ಸಾಹಿತ್ಯವನ್ನು ನಮ್ಮ ಸರ್ಕಾರದ ಸೇರಿಸಿದೆ. ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕುವೆಂಪು ಅವರ ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ಅವರಿಗೂ ಕಾಂಗ್ರೆಸ್‌ ಅವಮಾನ ಮಾಡಿದೆ. ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಿಂದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಹಾಗೂ ಮಹಾತ್ಮಾ ಗಾಂಧಿ ಕುರಿತಾದ ಪಠ್ಯವನ್ನು ಕೈ ಬಿಟ್ಟಿದ್ದರು’ ಎಂದು ಬಿಜೆಪಿ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT