ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಹರಡಿಸಿದ್ದೇ ಬಿಜೆಪಿ ಸರ್ಕಾರ: ಡಿ.ಕೆ.ಶಿವಕುಮಾರ್ ಆರೋಪ

Last Updated 1 ಜನವರಿ 2021, 10:50 IST
ಅಕ್ಷರ ಗಾತ್ರ

ಬೆಂಗಳೂರು: 'ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ. ಅವರ ಅಧಿಕಾರದ ಬಗ್ಗೆ ನಾವು ಪ್ರಶ್ನಿಸಿದ್ದೇವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿದೆ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

'ಬಿಜೆಪಿ ಶಾಸಕರೇ ಬೇರೆ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದರೆ, ಎಲ್ಲೋ ಏನೋ ಯಡವಟ್ಟಾಗಿದೆ, ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ' ಎಂದು ಹೇಳಿದರು.

ಸೋಂಕು ಹರಡಿಸಿದ್ದೇ ಬಿಜೆಪಿ ಸರ್ಕಾರ!: ಇಂಗ್ಲೆಂಡ್‌ನಿಂದ ಬಂದವರಿಗೆ ರಾಜ್ಯದಲ್ಲಿ ವಿಳಾಸವಿದೆ. ವಿಮಾನ ನಿಲ್ದಾಣದಲ್ಲೇ ಅವರ ಪರೀಕ್ಷೆ ನಡೆಸಲು ಇವರಿಗೆ ಇದ್ದ ಕಷ್ಟವಾದರೂ ಏನು? ಆಡಳಿತದ ವಿಚಾರದಲ್ಲಿ ಈ ಸರ್ಕಾರ ಎಷ್ಟು ವಿಫಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ದೇಶದಲ್ಲಿ ಕೊರೋನಾ ಸೋಂಕು ಹರಡಿಸಿದ್ದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು.

ಆರಂಭದಲ್ಲೇ ಇದನ್ನು ನಿಯಂತ್ರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ರಾಜ್ಯದಿಂದ ಯಾರೂ ಕೂಡ ಹೊರಗಿನವರಿಗೆ ಸೋಂಕು ಹರಡಿಸಿಲ್ಲ. ಬೇರೆ ಭಾಗದಿಂದ ಬಂದವರಿಂದಲೇ ಸೋಂಕು ಹರಡಿದೆ. ಅವರನ್ನು ಮೊದಲೇ ಪರೀಕ್ಷಿಸಿ ನಿಯಂತ್ರಣ ಮಾಡಬೇಕಿತ್ತು.

ಗ್ರಾಮ ಪಂಚಾಯಿತಿ ಫಲಿತಾಂಶ ಸಮಾಧಾನ

ಗ್ರಾಮ ಪಂಚಾಯಿತಿ ಫಲಿತಾಂಶದಿಂದ ನಮಗೆ ಸಮಾಧಾನವಾಗಿದೆ. ಈ ಚುನಾವಣೆಯಲ್ಲಿ ಎಷ್ಟೇ ಹಣದ ದುರುಪಯೋಗವಾಗಿದ್ದರೂ, ಬೇರೆ ಒತ್ತಡವಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಪಕ್ಷಾತೀತ ಚುನಾವಣೆಯಾದರೂ ಪಂಚಾಯಿತಿಯಿಂದ ಸಂಸತ್ತಿನವರೆಗಿನ ಪಕ್ಷ ರಾಜಕಾರಣವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಈ ಫಲಿತಾಂಶದಿಂದ ನಮಗೆ ಸಮಾಧಾನವಿದೆ. ಅಧಿಕಾರವಿದೆ ಎಂದು ಕೆಲವರು ನಮ್ಮವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಹಳ್ಳಿ ಜನ ಆಪರೇಷನ್ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.

ಈ ತಿಂಗಳ 5ರಿಂದ 18ರವರೆಗೂ ಪ್ರವಾಸದಲ್ಲಿರುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಧ್ವನಿಯನ್ನು ಆಲಿಸಲು ನಿರ್ಧರಿಸಿದ್ದೇನೆ. 2021ರ ವರ್ಷ ನಮ್ಮ ಪಕ್ಷಕ್ಕೆ ಸಂಘಟನೆಯ ವರ್ಷ. ಸ್ಥಳೀಯವಾಗಿ ಏನೇನು ಸಮಸ್ಯೆ ಇದೆ ಎಂದು ಗಮನದಲ್ಲಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ ಎಂದರು.

ಶಾಲೆ ಆರಂಭವಾಗಬೇಕು

ಶಾಲೆ ಮುಚ್ಚಬೇಕು ಎಂದು ನಾನು ಹೇಳುವುದಿಲ್ಲ. ಶಾಲೆ ತೆರೆಯಬೇಕು. ಕೋವಿಡ್ ನಿಯಮ ಪಾಲಿಸಲಿ. ಮಕ್ಕಳಿಗೆ ವಿದ್ಯಾಭ್ಯಾಸ ಅಂತರವಿದ್ದರೆ ಕಲಿಕೆ ಗುಣಮಟ್ಟ ಕುಗ್ಗುತ್ತದೆ. ಶಿಕ್ಷಣ ಮೂಲಭೂತ ಅಗತ್ಯ ಆಗಿರುವುದರಿಂದ ಸರ್ಕಾರ ಶಾಲೆ ಆರಂಭಿಸಿದರೆ ನಾವು ಅದನ್ನು ವಿರೋಧಿಸುವುದಿಲ್ಲ.

ಹೊಸ ವರ್ಷದಲ್ಲಿ ಸರ್ಕಾರ ಸಮಾಜದ ಪ್ರತಿಯೊಂದು ವರ್ಗದ ಬಗ್ಗೆಯೂ ಆಲೋಚನೆ ಮಾಡಲಿ ಎಂದು ಒತ್ತಾಯ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT