ಬೆಂಗಳೂರು: ‘ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕರೆದಿರುವ ಸರ್ವಪಕ್ಷ ಸಭೆಯ ಆಹ್ವಾನ ನಮಗೆ ಇನ್ನೂ ಬಂದಿಲ್ಲ. ಬಂದ ನಂತರ ಪಕ್ಷದ ನಾಯಕರ ಜೊತೆ ಚರ್ಚಿಸಿ, ಸಭೆಯಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಬುಧವಾರ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
‘ಸೋಂಕು ನಿಯಂತ್ರಣಕ್ಕೆ ಮಹಾರಾಷ್ಟ್ರ ಮಾದರಿ ಅಥವಾ ಬೇರೆ ಯಾವುದೇ ಮಾದರಿ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮನ್ನು ಕರೆಸಿ ಮಾತನಾಡಿದ ಮೇಲೆ ನಮ್ಮ ಸಲಹೆಗಳನ್ನು ಪರಿಗಣಿಸಬೇಕು. ಸುಮ್ಮನೆ ಸಭೆ ನಡೆಸಿ, ಅವರಿಷ್ಟ ಬಂದಂತೆ ನಡೆದುಕೊಳ್ಳುವುದಲ್ಲ’ ಎಂದರು.
‘ಲಾಕ್ಡೌನ್ಗಿಂತ ಜನರ ಜೀವ ಹಾಗೂ ಜೀವನ ಮುಖ್ಯ. ಲಾಕ್ಡೌನ್ ಬೇಡ ಎನ್ನುವುದು ನನ್ನ ವೈಯುಕ್ತಿಕ ಅಭಿಪ್ರಾಯ ಸರ್ಕಾರ ಅವರದೇನೋ ಮುಚ್ಚಿಕೊಳ್ಳಲು ಲಾಕ್ಡೌನ್, ಮತ್ತೊಂದು ಎನ್ನುತ್ತಿದ್ದಾರೆ’ ಎಂದರು.
ಸಂವಿಧಾನವೆ ನಮ್ಮ ಪಾಲಿಗೆ ಭಗವದ್ಗೀತೆ: ‘ಅಂಬೇಡ್ಕರ್ ಕೊಟ್ಟ ಸಂವಿಧಾನವೆ ನಮ್ಮ ಪಾಲಿಗೆ ಭಗವದ್ಗೀತೆ, ಬೈಬಲ್ ಹಾಗೂ ಕುರಾನ್. ಅದನ್ನು ಬದಲಿಸಬೇಕು ಅಂತ ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ನಾವೆಲ್ಲಾ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಬದುಕಬೇಕು’ ಎಂದರು.
ಮಸ್ಕಿ ಉಪ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಕಾರಣ, ನಿಗದಿತ ಸಮಯಕ್ಕಿಂತ ಮೊದಲೇ ಅವರು ಕಾಂಗ್ರೆಸ್ ಕಚೇರಿಗೆ ಬಂದಿದ್ದರು. ಪಕ್ಷದ ಮುಖಂಡ ಕೆ.ಎಚ್. ಮುನಿಯಪ್ಪ ಕೂಡಾ ಜೊತೆಗಿದ್ದರು.