ಬೆಂಗಳೂರು: ‘ಪವರ್ ಪ್ಲಸ್’ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಯನ್ನು ಕೆಎಸ್ಆರ್ಟಿಸಿ ಆರಂಭಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಚಾಲನೆ ನೀಡಿದರು.
50 ಎಲೆಕ್ಟ್ರಿಕ್ ಬಸ್ಗಳು ಕೆಎಸ್ಆರ್ಟಿಸಿ ಸೇರ್ಪಡೆಯಾಗಲಿದ್ದು, ಈ ಪೈಕಿ 25 ಬಸ್ಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿಸಿದರು. ರಾಜಧಾನಿಗೆ ಸೀಮಿತವಾಗಿದ್ದ ಎಲೆಕ್ಟ್ರಿಕ್ ಬಸ್ಗಳು ಇನ್ನು ಸಮೀಪದ ನಗರಗಳಿಗೂ ವಿಸ್ತರಣೆಯಾಗಲಿವೆ. ಹಂತ–ಹಂತವಾಗಿ ಎಲ್ಲಾ ನಗರಗಳಿಗೂ ಈ ಬಸ್ಗಳು ಸಂಚರಿಸಲಿದ್ದು, 350 ಎಲೆಕ್ಟ್ರಿಕ್ ಬಸ್ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ.
ಡಿಸೆಂಬರ್ನಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಬಂದಿತ್ತು. ಬೆಂಗಳೂರು–ಮೈಸೂರು ನಡುವೆ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿತ್ತು. ಪ್ರಯಾಣಿಕರಿಂದ ಉತ್ತಮ ಸ್ಪಂದನವೂ ವ್ಯಕ್ತವಾಗಿತ್ತು. 25 ಬಸ್ಗಳು ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಕಾರ್ಯಾಚರಣೆ ಮಾಡಲಿವೆ.
ಎರಡರಿಂದ ಮೂರು ಗಂಟೆಗಳಲ್ಲಿ ಬ್ಯಾಟರಿಗಳನ್ನು ಸಂಪೂರ್ಣ ಚಾರ್ಜ್ ಮಾಡಬಹುದಾಗಿದ್ದು, ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 300 ಕಿಲೋ ಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಚಾಲಕರು, ನಿರ್ವಾಹಕರಿಗೂ ಸೇರಿ 45 ಪುಶ್ಬ್ಯಾಕ್ ಆಸನಗಳನ್ನು ಹೊಂದಿವೆ. ಸಿಸಿಟಿವಿ ಕ್ಯಾಮೆರಾ, ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮತ್ತು ಇತರ ಸುರಕ್ಷಾ ಕಿಟ್ಗಳನ್ನು ಹೊಂದಿವೆ.
ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಉಪಾಧ್ಯಕ್ಷ ಮೋಹನ್ ಬಿ.ಮೆಣಸಿನಕಾಯಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.