ಬೆಂಗಳೂರು: ರಾಜ್ಯದಾದ್ಯಂತ ನಡೆದ ‘ಕಾರ್ಮಿಕ ಅದಾಲತ್’ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಕಾರ್ಮಿಕ ಇಲಾಖೆ, 1.54 ಲಕ್ಷ ಕಾರ್ಮಿಕರಿಗೆ ₹ 89.05 ಕೋಟಿ ಪಾವತಿಸಿದೆ.
ಕನಿಷ್ಠ ವೇತನ, ಪಿಂಚಣಿ, ಮಾಲೀಕ –ಕಾರ್ಮಿಕ ನಡುವಿನ ವಿವಾದ, ಸೌಲಭ್ಯಗಳಿಂದ ವಂಚನೆ ಸೇರಿದಂತೆ 3.02 ಲಕ್ಷ ಪ್ರಕರಣಗಳ ಪೈಕಿ, 2.83 ಲಕ್ಷ ಪ್ರಕರಣಗಳು ಅದಾಲತ್ನಲ್ಲಿ ಇತ್ಯರ್ಥಗೊಂಡಿದೆ. ಆ ಮೂಲಕ, ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ನೂರಾರು ಪ್ರಕರಣಗಳು ಮುಕ್ತಿ ಕಂಡಿವೆ.
ಜಿಲ್ಲೆ, ತಾಲ್ಲೂಕು ಮಟ್ಟವಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಆಗಸ್ಟ್ 16ರಿಂದ ಸೆ. 15ರವರೆಗೆ ಅದಾಲತ್ ನಡೆದಿತ್ತು.
ಅರೆ ನ್ಯಾಯಿಕ ಪ್ರಕರಣ: ಕನಿಷ್ಠ ವೇತನ ಕಾಯ್ದೆ, ಉಪಧನ ಪಾವತಿ ಕಾಯ್ದೆ ಸೇರಿದಂತೆ ವಿವಿಧ ಕಾರ್ಮಿಕ ಕಾಯ್ದೆಯಡಿ (ಅರೆ ನ್ಯಾಯಿಕ ಪ್ರಕರಣ) 1,213 ದೂರುಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲಿ ಮಾಲೀಕ ಮತ್ತು ಕಾರ್ಮಿಕರ ಮಧ್ಯೆ ಸಂಧಾನ ನಡೆಸಿ 19,253 ಕಾರ್ಮಿಕರಿಗೆ ಒಟ್ಟು 4.09 ಕೋಟಿ ನೀಡಲಾಗಿದೆ.
ಇತರ ಪ್ರಕರಣ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುವ ಸೌಲಭ್ಯಗಳು ಸಿಕ್ಕಿಲ್ಲವೆಂದು 3.01 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಪೈಕಿ, 2.82 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿದ್ದರಿಂದ 1.35 ಲಕ್ಷ ಕಾರ್ಮಿಕರಿಗೆ ಅನುಕೂಲ ಆಗಿದೆ. ಈ ಪ್ರಕರಣಗಳಲ್ಲಿ ₹ 84.96 ಕೋಟಿಯನ್ನು ಕಾರ್ಮಿಕರಿಗೆ ನೀಡಲಾಗಿದೆ.
‘ಅದಾಲತ್ಗೂ ಮೊದಲು ಇಲಾಖೆಯ ಅಡಿಯಲ್ಲಿರುವ ಎಲ್ಲ ಕಚೇರಿಗಳಲ್ಲಿ 1.76 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದವು. ಅದಾಲತ್ಗೆ ಮತ್ತೆ 1.26 ಲಕ್ಷ ಅರ್ಜಿಗಳು ಬಂದಿತ್ತು. ಈ ಎಲ್ಲ ಅರ್ಜಿಗಳನ್ನು ವಿಲೇವಾರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಆಸಕ್ತಿ ವಹಿಸಿ ನಿರ್ದೇಶನ ನೀಡಿದ್ದರು‘ ಎಂದು ಇಲಾಖೆಯ ಆಯುಕ್ತ ಅಕ್ರಂ ಪಾಷಾ ತಿಳಿಸಿದರು.