ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕಲುಷಿತ: ಹಸಿರು ಬಣ್ಣಕ್ಕೆ ತಿರುಗಿದ ಲಕ್ಷ್ಮಣತೀರ್ಥ

ಪರಿಸರ ಇಲಾಖೆಯಿಂದ ನಗರಸಭೆ, ಪುರಸಭೆಗಳಿಗೆ ನೋಟಿಸ್‌, ಗಂಗಾ ನದಿ ಸ್ವಚ್ಛತೆ ಮಾದರಿ
Last Updated 2 ಮಾರ್ಚ್ 2021, 20:26 IST
ಅಕ್ಷರ ಗಾತ್ರ

ಮೈಸೂರು:ಹುಣಸೂರು ಪಟ್ಟಣದೊಳಗೆಹರಿದುಹೋಗುವ ಲಕ್ಷ್ಮಣತೀರ್ಥ ನದಿಯಲ್ಲಿ ಹಸಿರು ಪಾಚಿ ಬೆಳೆದಿದ್ದು, ಕಲ್ಮಶ ಸೇರಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯ ತುಂಬಿ ಚರಂಡಿಯಾಗಿ ಮಾರ್ಪಟ್ಟಿದೆ.

ಕಲುಷಿತ ನೀರು ಬಿಳಿಕೆರೆ ಹೋಬಳಿಯ ರಾಮೇನಹಳ್ಳಿ ಬಳಿ ಕಾವೇರಿ ನದಿಗೆ ಸೇರಲಿದೆ. ಈಗಲೂ ಹುಣಸೂರು ನಗರದಿಂದ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಗೆ ಸೇರುತ್ತಲೇ ಇದೆ. ಹಲವು ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಶುದ್ಧೀಕರಣ ಪೂರ್ಣ ನಡೆಯಲಿಲ್ಲ.

ಸ್ವಚ್ಛತೆಗೆ ಯೋಜನೆ:ಜೀವನದಿ ಕಾವೇರಿ ಹಾಗೂ ಅದರ ಉಪಪನದಿಗಳು ಭಾರಿ ಪ್ರಮಾಣದಲ್ಲಿ ಕಲುಷಿತ ಆಗುತ್ತಿರುವುದರಿಂದ ಗಂಗಾ ನದಿ ಮಾದರಿಯಲ್ಲಿಯೇ ಸ್ವಚ್ಛತಾ ಅಭಿಯಾನ ಈಗ ರೂಪಿಸಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.

ಈ ನಿಟ್ಟಿನಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್‌ ನೀಡಲು ಪರಿಸರ ಹಾಗೂ ಜೀವಿವಿಜ್ಞಾನ ಇಲಾಖೆ ನಿರ್ಧರಿಸಿದೆ.

ಪ್ರಮುಖವಾಗಿ ಕುಶಾಲನಗರ, ಹುಣಸೂರು, ನಂಜನಗೂಡು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೇಗಾಲ ಪಟ್ಟಣಗಳ ಕೊಳಚೆ ನೀರು ಕಾವೇರಿ ಅಥವಾ ಅದರ ಉಪನದಿಗಳಿಗೆ ಸೇರುತ್ತಿದೆ.

‘ಕಾವೇರಿ ನದಿ ಹಾಗೂ ಉಪನದಿಗಳು ಕಲುಷಿತಗೊಳ್ಳುತ್ತಿರುವ ಕಾರಣ ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್‌ ನೀಡಲಾಗುವುದು. ನೀರು ಬಳಕೆ ಮಾಡಲಾಗದಷ್ಟು ನದಿಗಳು ಮಲಿನಗೊಂಡಿವೆ. ಕಾವೇರಿ ನದಿ ಉದ್ದಗಲಕ್ಕೂ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಸಚಿವ ಸಿ.ಪಿ.ಯೋಗೇಶ್ವರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಲ್ಲಾ ಕಡೆ ನೀರನ್ನು ನಾವೇ ಕಲುಷಿತಗೊಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಮಲಿನ ನೀರನ್ನು ಕುಡಿಯುತ್ತಿದ್ದೇವೆ’ ಎಂದರು.

ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 98 ಉಪನದಿ, ತೊರೆ, ಹಳ್ಳಗಳು ಕಾವೇರಿ ನದಿ ಸೇರುತ್ತಿವೆ. ಈ ನದಿ ಪಾತ್ರಗಳ ವ್ಯಾಪ್ತಿಗೆ ಬರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ಕೊಳಚೆ ನೀರು ಜಲಮೂಲ ಸೇರುತ್ತಿದೆ. ಕೊಳಚೆ ನೀರನ್ನು ಸಂಸ್ಕರಿಸದೆ ನದಿಗೆ ಹರಿಸುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಈಚೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.

ಕೊಡಗು ಜಿಲ್ಲೆಯಲ್ಲಿ ನದಿ ಪಾತ್ರಗಳಲ್ಲೇ ರೆಸಾರ್ಟ್‌ ಹಾಗೂ ಹೋಂಸ್ಟೇ ಹೆಚ್ಚುತ್ತಿವೆ. ಜೊತೆಗೆ ಕಾಫಿ ಕೊಯ್ಲು ಸಂದರ್ಭದಲ್ಲಿ ಕಾಫಿಪಲ್ಪಿಂಗ್‌ ಮಾಡಿದ ನೀರು ಹಾಗೂ ಕೈಗಾರಿಕೆಗಳ ಕಲುಷಿತ ನೀರು ನದಿಗೆ ಹರಿಯುತ್ತಿದೆ.

ನದಿಯಲ್ಲಿ ಸ್ನಾನ ಮಾಡುವವರು, ಪೂಜೆಗೆ ಬರುವವರು ಹಳೆಯ ಬಟ್ಟೆಗಳನ್ನು ನದಿಗೆ ಎಸೆಯುತ್ತಾರೆ. ಪಿಂಡ ಪ್ರದಾನ, ಅಸ್ಥಿವಿಸರ್ಜನೆ, ಹೋಮ, ಹವನ ಸಂದರ್ಭದಲ್ಲಿ ಅನ್ನ, ಹಣ್ಣು, ತರಕಾರಿ, ಇತರೆ ವಸ್ತುಗಳನ್ನು ನದಿ ಒಡಲಿಗೆ ಹಾಕುತ್ತಿದ್ದಾರೆ.

‘ಕಾವೇರಿ ನದಿಯ ಹಲವೆಡೆ ಪೊದೆ, ಸತ್ತೆ ಗಿಡ ಬೆಳೆದು ತ್ಯಾಜ್ಯ ತುಂಬಿದೆ. ನೀರುಸರಾಗವಾಗಿ ಹರಿಯಲು ಸಾಧ್ಯವಾಗದ ಸ್ಥಿತಿ ಇದೆ’ ಎನ್ನುತ್ತಾರೆ ಕಾವೇರಿ ನದಿ ಬಗ್ಗೆ ಯುಜಿಸಿಗೆ ಸಂಶೋಧನಾ ವರದಿ ಸಲ್ಲಿಸಿರುವ ‍ಪ್ರೊ.ರಂಗರಾಜು.

***

ನಗರ, ಪಟ್ಟಣಗಳಲ್ಲಿ ಕೊಳಚೆ ನೀರನ್ನು ಸಂಸ್ಕರಿಸದೆ ಕಾವೇರಿ ಹಾಗೂ ಉಪನದಿಗಳಿಗೆ ಹರಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು

- ಸಿ.ಪಿ.ಯೋಗೇಶ್ವರ್‌,ಪರಿಸರ ಹಾಗೂ ಜೀವಿ ವಿಜ್ಞಾನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT