ಶಿಡ್ಲಘಟ್ಟದಿಂದ ಈ ಸಲ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅಲ್ಲಿನ ಶಾಸಕ ವಿ.ಮುನಿಯಪ್ಪ, ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸ್ಪರ್ಧೆ ಮಾಡುವರು ಎಂದು ಈಗಾಗಲೇ ಘೋಷಿಸಿದ್ದಾರೆ. ಶಿಡ್ಲಘಟ್ಟಕ್ಕೆ ಗೋವಿಂದ ಗೌಡ ಹೆಸರನ್ನು ಪಕ್ಷದ ಟಿಕೆಟ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.
ಈ ನಡುವೆ, ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ ಇಳಿಯದಿದ್ದರೆ ಗೋವಿಂದಗೌಡ ಅವರನ್ನು ಆ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ಸುಕರಾಗಿದ್ದಾರೆ. ಹಾಗಾಗಿ, ಮೊದಲ ಪಟ್ಟಿಯಲ್ಲಿ ಶಿಡ್ಲಘಟ್ಟದ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ ಎಂದು ಮೂಲಗಳು ಹೇಳಿವೆ.
ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಎಂ.ವೈ.ಪಾಟೀಲ ಅವರು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಪುಲಕೇಶಿನಗರ, ಹರಿಹರ, ಲಿಂಗಸುಗೂರು ಹಾಗೂ ಕುಂದಗೋಳದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟ ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ಹೇಳಿವೆ. ಈ ಕ್ಷೇತ್ರಗಳಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ ಮುಂದಿನ ಹೆಜ್ಜೆ ಇಡಲು ಪಕ್ಷ ತೀರ್ಮಾನಿಸಿದೆ.
ತನ್ನ ಬದಲು ಪುತ್ರನಿಗೆ ಟಿಕೆಟ್ ನೀಡುವಂತೆ ಪಾವಗಡದ ಶಾಸಕ ವೆಂಕಟರಮಣಪ್ಪ ಕೋರಿಕೊಂಡಿ ದ್ದರು. ಅವರ ಪುತ್ರ ವೆಂಕಟೇಶ್ ಉಮೇದುವಾರಿಕೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ವರುಣಾದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಂದೆಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಟಿಕೆಟ್ ಬೇಡವೆಂದು ಹೇಳಿದ್ದ ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಅವರನ್ನು ಸಮಾಧಾನಪಡಿಸಿ ಕಣಕ್ಕೆ ಇಳಿಸಲಾಗಿದೆ.