ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಮೇ 12 ರವರೆಗೆ ವಿಧಿಸಿರುವ ಕರ್ಫ್ಯೂ ನಿರೀಕ್ಷಿತ ಫಲ ನೀಡದೇ ಇರುವ ಕಾರಣ ಮುಂದೆ ಸಂಪೂರ್ಣ ಲಾಕ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೊರೊನಾ ಸೋಂಕಿನ ಪ್ರಸರಣದ ಮೇಲೆ ಕಡಿವಾಣ ಬಿದ್ದಿಲ್ಲ. ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಲಾಕ್ಡೌನ್ ಮಾಡದೇ ಬೇರೆ ದಾರಿ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಈವರೆಗೆ 1 ಕೋಟಿ ಡೊಸ್ ಲಸಿಕೆ ಹಾಕಲಾಗಿದೆ. ಮೇ 15 ರ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಮೂರನೇ ಅಲೆ ಕಾಣಿಸಿಕೊಳ್ಳುವ ಮೊದಲು ಎಲ್ಲರಿಗೂ ಲಸಿಕೆ ಹಾಕಿಸಲಾಗುವುದು ಎಂದು ಸುಧಾಕರ್ ಹೇಳಿದರು.
ಕೋವಿಡ್ ನಿರ್ವಹಣೆಯನ್ನು ಐವರು ಹಿರಿಯ ಸಚಿವರಿಗೆ ಹಂಚಿಕೆ ಮಾಡಿರುವ ಬಗ್ಗೆ ಯಾವುದೇ ಬೇಸರ ಉಂಟು ಮಾಡಿಲ್ಲ. ಇದರಿಂದ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಬಲ ಬಂದಂತಾಗಿದ್ದು, ಕೆಲಸಗಳು ಸುಗಮವಾಗಿ ನಡೆಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, ನಾನು ರಾಜೀನಾಮೆ ಕೊಟ್ಟ ನಂತರವೇ ಸಚಿವನಾಗಿದ್ದು. ಈ ಸಮಯದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಕೊರೊನಾ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.