ಬೆಂಗಳೂರು: ಮೇಕೆದಾಟುವಿನಿಂದ ಭಾನುವಾರ ಆರಂಭವಾಗುವ ಪಾದಯಾತ್ರೆಗೆ ಪೂರ್ವಭಾವಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕನಕಪುರದ ಮನೆಯಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಶಾಸಕರು ಮತ್ತು ಹಿರಿಯ ಮುಖಂಡರ ಸಭೆ ನಡೆಯಲಿದೆ.
ಸಭೆಗೆ ಹಾಜರಾಗುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ. ತುಕಾರಾಮ್ ಎಲ್ಲ ಶಾಸಕರಿಗೂ ಶುಕ್ರವಾರ ಪತ್ರ ಕಳುಹಿಸಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಯೊಳಗೆ ಕನಕಪುರ ತಲುಪಬೇಕು ಮತ್ತು ಎಲ್ಲ ಶಾಸಕರೂ ಲಗ್ಗೇಜಿನ ಸಮೇತ ಬರಬೇಕು ಎಂಬ ಸೂಚನೆ ಪತ್ರದಲ್ಲಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭವಾಗಲಿದೆ. ಈ ಕುರಿತು ಶನಿವಾರ ಸಂಜೆ ಕನಕಪುರದಲ್ಲಿ ಸಮಾಲೋಚನೆ ನಡೆಯಲಿದೆ. ನಂತರ ಎಲ್ಲ ಶಾಸಕರು ಮತ್ತು ಮುಖಂಡರಿಗೆ ಅಲ್ಲಿಯೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.