ಮಂಡ್ಯ: ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕಾಯಿ ಕಟ್ಟಿದ ಭತ್ತಕ್ಕೆ (ವಡೆ ಭತ್ತ) ರಾಸಾಯನಿಕರ ಗೊಬ್ಬರ ಬಿತ್ತನೆ ಮಾಡುವ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರೈತರು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಅಂಗವಾಗಿ ನ.14ರಂದು ಕೆ.ಆರ್.ಪೇಟೆ ತಾಲ್ಲೂಕು ಮಡುವಿನಕೋಡಿ ಗ್ರಾಮದಲ್ಲಿ ಇಡೀ ದಿನ ಸಚಿವರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ರಾಗಿ, ಭತ್ತದ ನಾಟಿ, ಯಾಂತ್ರೀಕೃತ ಕೃಷಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ರೈತರೊಂದಿಗೆ ರೈತರಾಗಿ ಅವರ ಸಮಸ್ಯೆ ಆಲಿಸಿದ್ದರು.
ಕೃಷಿ ಕೆಲಸ ಮಾಡುವಾಗ ಬೆಳೆದು ನಿಂತಿದ್ದ ಭತ್ತದ ಗದ್ದೆಯಲ್ಲಿ ಸಚಿವರು ರಾಸಾಯನಿಕ ಗೊಬ್ಬರ (ಉಪ್ಪು) ಬಿತ್ತನೆ ಮಾಡಿದ್ದರು. ಭತ್ತದ ಪೈರು ಕಾಯಿಕಟ್ಟಿದ್ದು ಈ ಹಂತದಲ್ಲಿ ಗೊಬ್ಬರ ಬಿತ್ತನೆ ಮಾಡಲು ಸಾಧ್ಯವೇ ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಕೃಷಿಯ ಪ್ರಾಥಮಿಕ ಜ್ಞಾನವೂ ಇಲ್ಲದ ಸಚಿವರು ಕೇವಲ ತೋರಿಕೆಗಾಗಿ ಗೊಬ್ಬರ ಬಿತ್ತನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ.