ಮೋಳೆ: ಕಾಗವಾಡ ತಾಲ್ಲೂಕಿನ ಮೊಳವಾಡ ಗ್ರಾಮದಲ್ಲಿ ಸೋಮವಾರ ಸಂಜೆ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ ಅವರನ್ನು ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು.
‘ನಾವೆಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದರೂ ಒಂದು ವರ್ಷದಿಂದ ಇತ್ತ ಸುಳಿಯಲಿಲ್ಲ. ಪರಿಹಾರ ಸಿಕ್ಕಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಕಾಟಾಚಾರಕ್ಕಾಗಿ ವೀಕ್ಷಣೆಗೆ ಬಂದಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಮನೆಗಳಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಬೆಳೆ ಪರಿಹಾರವೂ ದೊರೆತಿಲ್ಲ. ಭರವಸೆ ಈಡೇರಿಸುವ ಕೆಲಸವನ್ನೂ ನೀವು ಮಾಡಿಲ್ಲ. ನಾವು ಸತ್ತ ಮೇಲೆ ಬರಬೇಕಿತ್ತು’ ಎಂದು ಆಕ್ರೋಶದಿಂದ ಕೇಳಿದರು.
‘ಸಂತ್ರಸ್ತರಿಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲ. ಯಾರೋ ನಾಲ್ವರು ಕುಡಿದು ಬಂದು ಗಲಾಟೆ ಮಾಡಿದ್ದಾರೆ. ಜನರಿಗೆ ಏನೇ ಸಮಸ್ಯೆ ಇದ್ದರೂ ಪರಿಹರಿಸಲಾಗುವುದು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.