ಬೆಂಗಳೂರು: ಇಬ್ಬರು ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕೆ ಕಿರುಕುಳ ನೀಡಿ ಅಪಮಾನಿಸಿ ಮಹಿಳೆಯ ಸಾವಿಗೆ ಕಾರಣರಾದ ಪತಿ, ಅತ್ತೆ ಹಾಗೂ ಸಹೋದರಿಯನ್ನು ಅಪರಾಧಿಗಳು ಎಂದು ಸಾರಿರುವ ಹೈಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿದೆ.
ಮಂಡ್ಯದ ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಗಳಾದ ಬಿ.ವೀರಪ್ಪ ಮತ್ತು ಎಸ್.ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ.
ಇಬ್ಬರು ಮಕ್ಕಳು ಪತಿ ಮಾದೇಶ, ಅತ್ತೆ ಮಾದಮ್ಮ ಮತ್ತು ಸಹೋದರಿ ಮಹದೇವಮ್ಮ ಬಳಿ ಇರುವ ಕಾರಣ ಮೂವರಿಗೂ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿದೆ.
ಮಂಡ್ಯದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು.
‘ಸಂತ್ರಸ್ತೆ ಹೇಮಲತಾ ಸಾಯುವ ಮುನ್ನ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಅನುಮಾನಾಸ್ಪದವಾಗಿವೆ. ಆದರೆ, ಸಂತ್ರಸ್ತೆಗೆ ಕಿರುಕುಳ ನೀಡಿರುವ ವಿಚಾರದಲ್ಲಿ ಸಾಕ್ಷ್ಯಗಳು ಸರಿಯಾಗಿವೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.