ಬೆಂಗಳೂರು: ರಾಜ್ಯದ 50 ಕಾರಾಗೃಹಗಳಲ್ಲಿ ಇರುವ ಅನಕ್ಷರಸ್ಥ ಹಾಗೂ ಅರೆ ಅಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಸಲು ‘ನವಚೇತನ’ ಯೋಜನೆಯಡಿ ‘ಸಾಕ್ಷರತೆ’ ಕಾರ್ಯಕ್ರಮವು ಕರ್ನಾಟಕ ರಾಜ್ಯೋತ್ಸವದ ದಿನವಾದನ. 1ಕ್ಕೆ ಚಾಲನೆ ದೊರೆಯಲಿದೆ.
ಕೈದಿಗಳ ದೈಹಿಕ, ಮಾನಸಿಕ, ಶಿಕ್ಷಣ ಹಾಗೂ ಕೌಶಲ ಮಟ್ಟವನ್ನು ಸುಧಾರಿಸಿ ಸ್ವಾಭಿಮಾನಿಗಳಾಗಿ ಮಾಡುವ ಗುರಿ ಈ ಕಾರ್ಯಕ್ರಮದ್ದಾಗಿದೆ. ರಾಜ್ಯದ 50 ಕಾರಾಗೃಹಗಳ ಅನಕ್ಷರಸ್ಥ, ಅರೆ ಅಕ್ಷರಸ್ಥ 7,000 ಕೈದಿಗಳಿಗೆ ಇದರ ನೆರವು ಸಿಗಲಿದೆ.
‘ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನ್ನಾಗಿಸಿದರೆ, ಬಿಡುಗಡೆಯಾದ ಬಳಿಕಅವರು ಸುಂದರ ಬದುಕು ಕಟ್ಟಿಕೊಳ್ಳುತ್ತಾರೆ’ ಎಂದು ಕಾರಾಗೃಹ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
‘ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನವಚೇತನ ಯೋಜನೆಯಡಿ ಆ. 26ರಂದು ‘ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದ್ದರು. 540 ಕೈದಿಗಳು ಯೋಗ ಕಲಿತಿದ್ದರು. ಇದರ ಮುಂದುವರಿದ ಭಾಗವಾಗಿ, ಸಾಕ್ಷರತಾ ಕಾರ್ಯಕ್ರಮ ಆರಂಭಿಸಲಾಗುತ್ತಿದೆ’ ಎಂದೂ ತಿಳಿಸಿದರು.
‘ಜೈಲಿನ ಕೆಲ ಕೈದಿಗಳು, ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು. ಅವರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಿಕೊಂಡು, ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಿಸಲಾಗುವುದು’ ಎಂದೂ ಹೇಳಿದರು.