ಮೈಸೂರು: ‘ನಾನು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ. ಕಾಂಗ್ರೆಸ್ನವರ ಆರೋಪ ಸತ್ಯಕ್ಕೆ ದೂರವಾದುದು’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
‘ಸಚಿವರು, ತಿಪಟೂರು ನಗರದಲ್ಲಿ ತಿರಂಗಾ ಯಾತ್ರೆ ವೇಳೆ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಎಬಿವಿಪಿ ಧ್ವಜ ಹಿಡಿದು ರಾಷ್ಟ್ರಕ್ಕೆ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸಿ ಅಲ್ಲಿನ ಯುವ ಕಾಂಗ್ರೆಸ್ ಘಟಕವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಬಗ್ಗೆ ಸಚಿವರು ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್ನವರು ತಿರುಚಿದ ಫೋಟೊ ಬಳಸಿ ದೂರುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
‘ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿ ಕೊಡುಗೆ ಏನು?’ ಎಂದು ಕೇಳಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಚಿವರು, ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ಸೇ ಬೇರೆ. ಈಗಿನದ್ದೇ ಬೇರೆ. ಸ್ವಾತಂತ್ರ್ಯ ಸಿಗುತ್ತಿದ್ದಂತೆಯೇ ಕಾಂಗ್ರೆಸ್ ವಿಸರ್ಜಿಸುವಂತೆ ಮಹಾತ್ಮ ಗಾಂಧೀಜಿ ಕರೆ ನೀಡಿದ್ದರು. ಆದರೆ, ಕೆಲವರು ಸ್ವಾರ್ಥಕ್ಕೋಸ್ಕರ ರಾಜಕೀಯಕ್ಕೆ ಬಳಸಿಕೊಂಡರು, ಉಳಿಸಿಕೊಂಡರು’ ಎಂದು ದೂರಿದರು.
‘ಆಗಿನ ಕಾಂಗ್ರೆಸ್ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದರು. ಆದರೆ, ಈಗಿನ ಕಾಂಗ್ರೆಸ್ನ ಯಾವೊಬ್ಬ ನಾಯಕನೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿಲ್ಲ. ಜೈಲಿಗೆ ಹೋಗಿಲ್ಲ. ಈಗಿರುವ ಕಾಂಗ್ರೆಸ್ ನಾಯಕರು ಬೇರೆ ಬೇರೆ ಕಾರಣಗಳಿಗಾಗಿ ಜೈಲಿಗೆ ಹೋಗಿದ್ದಾರೆ’ ಎಂದು ವ್ಯಂಗ್ಯವಾಡಿದರು. ‘ಮುಂಬರುವ ದಿನಗಳಲ್ಲಿ ಮತ್ತಷ್ಟು ಮಂದಿ ಕಾರಾಗೃಹಕ್ಕೆ ಹೋದರೆ ಅಚ್ಚರಿಪಡಬೇಕಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.