ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಬಿಜೆಪಿ ತನ್ನ ಅಭ್ಯರ್ಥಿ ಗೆಲುವಿಗೆ ಹಣದ ಹೊಳೆ ಹರಿಸಬಹುದು. ಮತದಾರರು ಬಿಜೆಪಿ ನೋಟು ಪಡೆದರೂ ಕಾಂಗ್ರೆಸ್ಗೆ ಓಟು ಕೊಡುವುದನ್ನು ಮರೆಯಬಾರದು’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
‘ಆಪರೇಷನ್ ಕಮಲದ ಮೂಲಕ ಅನ್ಯ ಪಕ್ಷದವರನ್ನು ಸೆಳೆದ ಬಿಜೆಪಿ ಚುನಾವಣೆಯಲ್ಲಿ ಏನೂ ಬೇಕಾದರೂ ಮಾಡಬಲ್ಲದು. ಮತದಾರರು ವಿವೇಚನೆಯಿಂದ ಮತಹಕ್ಕು ಚಲಾಯಿಸಬೇಕು’ ಎಂದು ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
’ಬಿ.ನಾರಾಯಣರಾವ್ ಶಾಸಕರಾಗಿದ್ದಾಗ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗಲು ಮತದಾರರು ಕಾಂಗ್ರೆಸ್ಗೆ ಬೆಂಬಲ ನೀಡಬೇಕು’ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಮುಖಂಡರಾದ ಬಸವರಾಜ ಬುಳ್ಳಾ, ದತ್ತಾತ್ರಿ ಮೂಲಗೆ ಇದ್ದರು.