ಬೆಂಗಳೂರು: ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ತ್ವರಿತವಾಗಿ ಪುನರಾರಂಭಿಸಲು ಕ್ರಮ ಕೈಗೊಳ್ಳುವಂತೆ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ. ನಾರಾಯಣ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು, ‘ಮೂರು ವರ್ಷ
ಗಳಿಂದ ಶಾಲೆ ಸ್ಥಗಿತಗೊಂಡಿದೆ. ಬೋಧಕ ಸಿಬ್ಬಂದಿ ನೇಮಕಾತಿ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನೂ ತ್ವರಿತವಾಗಿ ಕೈಗೊಳ್ಳಬೇಕು’ ಎಂದರು.
ವೈಮಾನಿಕ ಶಾಲೆಗೆ 214 ಎಕರೆ ಜಮೀನು ಲಭ್ಯವಿದೆ. ‘ಟ್ವಿನ್ ಎಂಜಿನ್’ ಚಾಲನೆ ತರಬೇತಿಗೆ ಅಗತ್ಯವಿರುವ ರನ್ವೇ ನಿರ್ಮಾಣಕ್ಕೆ 10 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರವಾಗಿ ಅದನ್ನು ಪೂರ್ಣಗೊಳಿಸಬೇಕು. ವಿದ್ಯಾರ್ಥಿಗಳಿದ್ದರೂ ಶಾಲೆ ನಡೆಸಲಾಗದ ಸ್ಥಿತಿ ಇರುವುದು ಸರಿಯಲ್ಲ. ಆದಷ್ಟು ಬೇಗ ವಿಮಾನ ಹಾರಾಟ ತರಬೇತಿ ಆರಂಭಕ್ಕೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬರಬೇಕಿರುವ ₹ 10 ಕೋಟಿ ಪರಿಹಾರದ ಮೊತ್ತವನ್ನು ತ್ವರಿತವಾಗಿ ಪಡೆದುಕೊಳ್ಳಬೇಕು. ಖಾಸಗಿ ವಿಮಾನಗಳ ಪಾರ್ಕಿಂಗ್ ಬಾಬ್ತು ಬಾಕಿ ಇರುವ ₹ 1.5 ಕೋಟಿಯಷ್ಟು ಶುಲ್ಕವನ್ನೂ ವಸೂಲಿ ಮಾಡಬೇಕು. ಮುಂದಿನ ದಿನಗಳಲ್ಲಿ ವಿಮಾನಗಳ ಪಾರ್ಕಿಂಗ್ ಶುಲ್ಕ ಆಯಾ ತಿಂಗಳಲ್ಲೇ ಪಾವತಿ ಮಾಡುವಂತಹ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ನಂತರ ವಿದ್ಯಾನಗರದಲ್ಲಿರುವ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.