'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.
****
ಹೆಸರು: ರಾಧಾಮಣಿ ಎಂ.ವಿ.
ವೃತ್ತಿ: ಸ್ವಯಂ ಸೇವಾ ಸಂಸ್ಥೆ
ಸಾಧನೆ: ವಿವಾಹ ವಿಚ್ಛೇದನಕ್ಕೆ ಒಳಗಾದವರಿಗೆ ಮರುಮದುವೆ ಮಾಡಿಸುವುದು
ಸರ್ಕಾರಿ ಉದ್ಯೋಗ ಪಡೆಯುವ ಕನಸು ಈಡೇರಲಿಲ್ಲ. ಹೀಗಾಗಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡೋಣವೆಂದು ಟೊಂಕಕಟ್ಟಿ ನಿಂತ ರಾಧಾಮಣಿ ಎಂ.ವಿ ಅವರು ವಿಧವೆ, ವಿದುರರಿಗೆ ಹಾಗೂ ವಿಚ್ಛೇದನ ಪಡೆದವರಿಗೆ ಅಂತರ್ಜಾತಿ ಮರುಮದುವೆ ಮಾಡಿಸುತ್ತಿದ್ದಾರೆ. ಈ ಮೂಲಕ ಹಲವರು ಹೊಸದಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.
ರಾಧಾಮಣಿ ಅವರದ್ದು ಕೆಜಿಎಫ್ ತಾಲ್ಲೂಕಿನ ತಂಬಾರ್ಲಹಳ್ಳಿ ಎಂಬ ಕುಗ್ರಾಮ. ಒಕ್ಕಲಿಗ ಸಮುದಾಯದ ಅವರಿಗೆ 45 ವರ್ಷ. ಅವರ ಪತಿ ಎನ್.ಅಶ್ವಥ್ ಕೃಷಿಕರು.
ಬಿ.ಇ, ಬಿ.ಇಡಿ ಪೂರೈಸಿರುವ ಅವರಿಗೆ ವಿವಿಧ ಇಲಾಖೆಯಲ್ಲಿ ನಾಲ್ಕು ಬಾರಿ ಸರ್ಕಾರಿ ಉದ್ಯೋಗ ಸಿಕ್ಕರೂ ಮನೆಯಲ್ಲಿನ ವಿರೋಧ ಸೇರಿದಂತೆ ವಿವಿಧ ಕಾರಣಗಳಿಂದ ಆ ಅವಕಾಶ ತಪ್ಪಿ ಹೋದವು. ಸದ್ಯ ಬಾಲನ್ಯಾಯ ಮಂಡಳಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ 28 ಮರುಮದುವೆ ಮಾಡಿಸಿದ್ದಾರೆ. ವಿವಿಧ ಕಾರಣಗಳಿಂದ ಮದುವೆಯಾಗದೆ ಉಳಿದಿದ್ದ ವಯಸ್ಸಾದ 49 ಮಂದಿಗೆ ಮದುವೆ ಮಾಡಿಸಿದ್ದಾರೆ. ವಾಟ್ಸ್ಆ್ಯಪ್ ಗುಂಪು ರಚಿಸಿದ್ದು, ಆ ಗುಂಪಿನಲ್ಲಿ ವೈದ್ಯರು, ಎಂಜಿನಿಯರ್, ಉಪನ್ಯಾಸಕರು, ಅಧಿಕಾರಿಗಳು, ರೈತರು, ಹೋರಾಟಗಾರರು ಸೇರಿದಂತೆ 350 ಮಂದಿ ಇದ್ದಾರೆ.
‘ಬೆಳಕು’ ಸ್ವಯಂ ಸೇವಾ ಸಂಸ್ಥೆ ಮೂಲಕ ಮಹಿಳಾ ದೌರ್ಜನ್ಯ, ಬಾಲ್ಯವಿವಾಹದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೆರೆಗಳ ಹೂಳೆತ್ತಿಸುವುದು, ಕೃಷಿ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕದಂತೆ ಅರಿವು ಮೂಡಿಸುವುದು, ಎಚ್ಐವಿ ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಬಡ ಮಕ್ಕಳಿಗೆ ಪುಸ್ತಕ ಸಾಮಗ್ರಿ ವಿತರಣೆ, ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.