ಬೆಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರುವಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಭಜರಂಗದಳ ಮುಖಂಡ ಪ್ರವೀಣ್ ನೆಟ್ಟಾರು ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಉಲ್ಲಾಳ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರು, ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು,"ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ"? ಎಂದುತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯೇ ಅವರ ಅಪ್ರಬುದ್ದತೆ ತೋರಿಸುತ್ತಿದೆ. ಸಮಾಜದಲ್ಲಿ ಶೇಕಡ ಒಂದರಷ್ಟಿರುವ ಘಾತುಕಶಕ್ತಿಗಳನ್ನು ಮಟ್ಟಹಾಕಿದರೆ, ಬಾಕಿ ಇರುವ ಶೇಕಡಾ 99 ರಷ್ಟು ಜನರಲ್ಲಿ ಧೈರ್ಯ ಹಾಗೂ ವಿಶ್ವಾಸ ಮೂಡಲಿದೆ’ ಎಂದಿದ್ದಾರೆ.
‘ಭದ್ರತೆ ಬಗ್ಗೆ ವಿಚಾರ ಮಾಡುವುದು ಬಿಟ್ಟು ಭದ್ರತೆ ನೀಡಲು ಸಾಧ್ಯವೇ? ಎಂದು ಆಡಳಿತ ಪಕ್ಷದವರಾಗಿಯೇ ಪ್ರಶ್ನಿಸುವುದು ನಿಮ್ಮ ಅಸಮರ್ಥತೆ ಹಾಗೂ ಅಸಹಾಯಕತೆಯನ್ನು ತೋರಿಸುತ್ತಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ನೆನಪಿರಲಿ’ ಎಂದು ಸಂಸದ ತೇಜಸ್ವಿ ಸೂರ್ಯ ಅವರನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
"ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ" ? ಎಂದು @Tejasvi_Surya ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯೇ ಅವರು ಅಪ್ರಬುದ್ದತೆ ತೋರಿಸುತ್ತಿದೆ. ಸಮಾಜದಲ್ಲಿರುವ ಸರಿಸುಮಾರು ಶೇಕಡ ಒಂದರಷ್ಟಿರುವ ಘಾತುಕಶಕ್ತಿಗಳನ್ನ ಮಟ್ಟಹಾಕಿದರೆ ಬಾಕಿ ಇರುವ ಶೇಕಡಾ 99 ರಷ್ಟು ಜನರಲ್ಲಿ ಧೈರ್ಯ ಹಾಗೂ ವಿಶ್ವಾಸ ಮೂಡಲಿದೆ. (1) @CMofKarnataka
— UT Khadér (@utkhader) July 28, 2022
ಬಿಜೆಪಿ ಯುವ ಮೋರ್ಚಾದಲ್ಲೂ ಗುರುತಿಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಜ್ಯದಾದ್ಯಂತ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಉಗ್ರವಾಗಿ ಖಂಡಿಸಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. 2020 ರಿಂದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಅವರು ನವದೆಹಲಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರವೀಣ್ ಹತ್ಯೆಯನ್ನು ಖಂಡಿಸಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಜಾಕೀರ್ ಸವಣೂರು ಹಾಗೂ ಶಫಿಕ್ ಬಂಧಿತರು. ತನಿಖೆ ಪ್ರಗತಿಯಲ್ಲಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇನ್ನಷ್ಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.