ಬಳ್ಳಾರಿ: ‘ಒಂದು ದಿನದ ಹಂಪಿ ಉತ್ಸವವನ್ನು ವಿರೋಧಿಸಿ ಹಾಗೂ ಮೂರು ದಿನಗಳ ಕಾಲ ಉತ್ಸವವನ್ನು ಆಚರಿಸಲೇಬೇಕು’ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ನಗರೂರು ನಾರಾಯಣರಾವ್ ಉದ್ಯಾನದಿಂದ ಗಡಿಗಿ ಚೆನ್ನಪ್ಪ ವೃತ್ತದವರೆಗೂ ಪಾದಯಾತ್ರೆ ನಡೆಸಿದ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ, ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
‘ಸರ್ಕಾರ ಮಾಡೋದು ಒಂದು ದಿನದ ಉತ್ಸವ, ಗೊತ್ತಿಲ್ಲ ಅವರಿಗೆ ವಿಜಯನಗರ ವೈಭವ’, ಮೂರು ದಿನದ ಹಂಪಿ ಉತ್ಸವ ಮಾಡಲೇಬೇಕು, ನಿರ್ಲಕ್ಷ್ಯ ಸಾಕು, ಸಾಕು’, ಹಂಪಿ ಉತ್ಸವದ ಘನತೆ ಕಾಪಾಡಿ’ ಎಂದು ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೂರು ದಿನ ಉತ್ಸವ ಮಾಡಿ. ‘ಕಾಟಾಚಾರದ ಹಂಪಿ ಉತ್ಸವ,ಬೇಡವೇ ಬೇಡ ಒಂದು ದಿನದ ಉತ್ಸವ, ನೀವು ಮಾಡೋದು ತುಂಗಾ ಆರತಿ, ಗೊತ್ತಿಲ್ಲ ನಿಮಗೆ ಹಂಪಿ ಉತ್ಸವದ ಕೀರ್ತಿ’, ‘ಕಲಾವಿದರ ಪೂರ್ವಭಾವಿ ಸಭೆ ಏಕೆ ಮಾಡಿಲ್ಲ, ಇಲ್ಲಿ ಕಲೆಗೆ ಬೆಲೆಯೇ ಇಲ್ಲ’, ಅಂದು ಹಂಪಿ ಆಯಿತು ಹಾಳು, ಇಂದು ಉತ್ಸವದ್ದೇ ಗೋಳು’ ಮೊದಲಾದ ಘೋಷಣೆಗಳು ಮೊಳಗಿದವು.
ವೃತ್ತದಲ್ಲಿ ಮಾತನಾಡಿದ ಮುಖಂಡ ಕೆ.ಜಗದೀಶ್, ’ಒಂದು ದಿನದ ಉತ್ಸವವನ್ನು ಘೋಷಿಸಿರುವ ಸರ್ಕಾರ ಹಂಪಿ ಉತ್ಸವದ ಘನತೆಯನ್ನು ಮಣ್ಣುಪಾಲು ಮಾಡಲು ಹೊರಟಿದೆ. ಜಿಲ್ಲಾಡಳಿತವು ಕೂಡ ಸರ್ಕಾರಕ್ಕೆ ಉತ್ಸವದ ಘನತೆಯ ಕುರಿತು ಮನವರಿಕೆ ಮಾಡಿಸುವಲ್ಲಿ ಸೋತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕಲಾವಿದರು ಮತ್ತು ವಿವಿಧ ಸಂಘಟನೆಗಳ ಸಭೆಯನ್ನು ಕರೆದು ಸಮಾಲೋಚನೆಯನ್ನೇ ನಡೆಸದೆ ಉತ್ಸವದ ಘೋಷಣೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ. ಕೊರೊನಾ ಕಾಲಘಟ್ಟದಲ್ಲಿ ಚುನಾವಣೆ ನಡೆಸಲು ಪ್ರಚಾರ ಮಾಡಲು ಹಿಂಜರಿಯದ ಸರ್ಕಾರ ಉತ್ಸವಕ್ಕೆ ಮಾತ್ರ ಹಿಂಜರಿಯುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.