ಹುಬ್ಬಳ್ಳಿ: ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಸೋಮವಾರ ಸ್ವಲ್ಪ ಇಳಿಕೆಯಾಗಿದ್ದರೂ ಹೊಲ, ಮನೆಗಳಿಗೆ ನುಗ್ಗಿರುವ ನೀರು ಪೂರ್ಣವಾಗಿ ಖಾಲಿಯಾಗಿಲ್ಲ. ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ 327 ಮನೆಗಳು ಜಲಾವೃತವಾಗಿವೆ. ಜಲಾವೃತವಾಗಿರುವ ಮನೆಗಳಲ್ಲಿ ಇದ್ದ 121 ಜನರನ್ನು ರಕ್ಷಣೆ ಮಾಡಲಾಗಿದೆ.
1,844 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭೀಮಾ ನದಿ ತೀರದ ಚಡಣಚ, ಇಂಡಿ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸದ್ಯ 39 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 4,431 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಹಾಗೂ ಹೊಸಪೇಟೆಯ ಸುತ್ತಮುತ್ತ ಮಳೆಯಾಗಿದೆ. ಕೃಷ್ಣಾ ನದಿಗೆ ನಿರ್ಮಿಸಿರುವ ಕಲ್ಲೋಳ–ಯಡೂರ ಹಾಗೂ ದೂಧ್ಗಂಗಾ ನದಿಗೆ ಕಟ್ಟಿರುವ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ–ದತ್ತವಾಡ ಸೇತುವೆ ಕಂ ಬ್ಯಾರೇಜ್ಗಳು ಸಂಚಾರಕ್ಕೆ ಮುಕ್ತವಾಗಿವೆ.